CP Krinakumar

ಸಿ ಪಿ ಕೃಷ್ಣಕುಮಾರ್ (ಸಿ.ಪಿ.ಕೆ.)

ಡಾ. ಸಿ ಪಿ ಕೃಷ್ಣಕುಮಾರ್ (ಸಿ.ಪಿ.ಕೆ.) (೦೮.೦೪.೧೯೩೯): ಹುಮುಖ ಪ್ರತಿಭೆಯ ಕವಿ, ವಿಮರ್ಶಕ, ಗ್ರಂಥಸಂಪಾದಕ, ಸಂಶೋಧಕರಾದ ಕೃಷ್ಣಕುಮಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ೧೯೩೯ರ ಏಪ್ರಿಲ್‌ ೮ರಂದು. ತಂದೆ ಪುಟ್ಟೇಗೌಡ, ತಾಯಿ ಚಿಕ್ಕಮ್ಮ. ಹುಟ್ಟಿದ ಒಂಬತ್ತು ತಿಂಗಳಿಗೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಬೆಳೆದದ್ದು ಅಜ್ಜಿ ಹಾಗೂ ಸೋದರತ್ತೆಯರ ಮಡಿಲಲ್ಲಿ.

ಪ್ರಾಥಮಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಪ್ರೌಢಶಾಲೆಯ ವಿದ್ಯಾಭ್ಯಾಸ ಸಾಲಿಗ್ರಾಮ. ಶಿವಮೊಗ್ಗೆಯಲ್ಲಿ ಇಂಟರ್‌ಮೀಡಿಯೇಟ್ ಓದಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿ ಹಾಗೂ ಮಾನಸಗಂಗೋತ್ರಿಯಿಂದ ಎಂ.ಎ. ಪದವಿಗಳು. ಈ ಎರಡು ಪದವಿಗಳನ್ನು ಪ್ರಥಮ ಶ್ರೇಣಿಯಲ್ಲಿ ಪಡೆದ ಕುಶಾಗ್ರಮತಿ. ೧೯೯೭ರಲ್ಲಿ “ನಾಗವರ್ಮನ ಕರ್ನಾಟಕ ಕಾದಂಬರಿ: ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ” ಎಂಬ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಭಾರತೀಯ ವಿದ್ಯಾಭವನದಿಂದ ಪಡೆದ ಸಂಸ್ಕೃತ ಕೋವಿದ ಪದವಿ.

ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ ೧೯೬೧ರಲ್ಲಿ ಉದ್ಯೋಗ ಪ್ರಾರಂಭ. ೧೯೬೪-೬೭ರವರೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ೧೯೬೯ರಲ್ಲಿ ಪ್ರವಾಚಕರಾಗಿ (ರೀಡರ್) ೧೯೮೦ರಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು ೧೯೯೯ರಲ್ಲಿ ನಿವೃತ್ತರಾದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು.

ಮಾಧ್ಯಮಿಕ ಶಾಲೆಯಲ್ಲಿದ್ದಾಗಿನಿಂದಲೇ ಪಠ್ಯೇತರ ಕೃತಿಗಳನ್ನು ಓದಿದ್ದೇ ಹೆಚ್ಚು. ಸರ್ವೇಯರ್ ಆಗಿದ್ದ ತಂದೆ ಪುಟ್ಟೇಗೌಡರು ‘ಕುಮಾರವ್ಯಾಸ ಭಾರತ’ವನ್ನು ವಾಚನ ಮಾಡುತ್ತಿದ್ದುದು ಮತ್ತು ಮಿಡ್ಲ್ ಸ್ಕೂಲಿನಲ್ಲಿದ್ದಾಗ ಸಾಲಿಗ್ರಾಮದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ನಡೆಸುತ್ತಿದ್ದ ಸಣ್ಣ ಗ್ರಂಥಾಲಯಕ್ಕೆ ಬರುತ್ತಿದ್ದ ಬೆಳಕು, ಪುಸ್ತಕ ಪ್ರಪಂಚ, ಪ್ರಜಾಮತ ಪತ್ರಿಕೆಗಳನ್ನು ಓದುತ್ತಿದ್ದುದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಸಹಾಯಕವಾದವು.

ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುತ್ತಿದ್ದ ಅನುವಾದಿತ ಲೇಖನಗಳನ್ನು ಓದುತ್ತ ಬಂದಂತೆ ಇವರಿಗೆ ಮುಂದೆ ಅನುವಾದದಲ್ಲಿ ಆಸಕ್ತಿ ಬೆಳೆಯಲು ಸಹಾಯಕವಾಯಿತು. ಈ ಸಂದರ್ಭದಲ್ಲಿ ಗೊರೂರು, ಕಾರಂತರ ಕಾದಂಬರಿಗಳ ಪರಿಚಯ ಮಾಡಿಕೊಂಡರು.

ಇವರ ಮೊದಲ ಅನುವಾದ, ಪ್ರೌಢಶಾಲೆಯ ಆಂಗ್ಲ ಪಠ್ಯದಲ್ಲಿದ್ದ ‘ಗಾಂಧಾರೀಸ್ ಲ್ಯಾಮೆಂಟ್’ ಎಂಬುದನ್ನು ‘ಗಾಂಧಾರಿಯ ಪ್ರಲಾಪ’ ಎಂದು ಅನುವಾದಿಸಿದರು.

ಶಿವಮೊಗ್ಗ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ ಇವರ ಗುರುಗಳು. ಜಿ.ಎಸ್.ಎಸ್.ರವರು ಆದ್ಯಕ್ಷರಾಗಿದ್ದ ಸಾಹಿತ್ಯ ಸಂಘಕ್ಕೆ ಇವರು ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಹಲವಾರು ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಕವನಕ್ಕಾಗಿ ಬಿ.ಎಂ.ಶ್ರೀ.ಯವರ ರಜತೋತ್ಸವ ಸುವರ್ಣ ಪದಕವನ್ನು ಪಡೆದ ಸಿಪಿಕೆಯವರು ಮೊಟ್ಟಮೊದಲು ಹೊರತಂದ ಕವನ ಸಂಕಲನ ‘ತಾರಾಸಖ’ (೧೯೭೦). ಕ್ರಿಯಾಶೀಲರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವನ, ಹನಿಗವನ, ಖಂಡಕಾವ್ಯ, ವಚನ, ಮುಕ್ತಕ, ಸುನೀತ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ರಚಿಸಿ ಪ್ರಕಟಿಸಿದ್ದು ೩೯ ಕಾವ್ಯ ಕೃತಿಗಳು. ಇವುಗಳಲ್ಲಿ ಅಂತರತಮ, ಒಳದನಿ, ಪ್ರಕೃತಿ, ಪರ್ಯಾಯ, ಬಿಂದು ಬೆರಗು, ಬೊಗಸೆ, ಮುಕ್ತಾಹಾರ, ಸಾನೆಟ್‌ಸಾಲು, ಸಿಪಿಕೆ ಚುಟುಕುಗಳು ಸುನೀತೋಗ, ಹನಿ ಮಿನಿ ಮುಂತಾದವು ಸೇರಿವೆ.

ಕಿರಣ ತೋರಣ, ಕೋಲ್ಮಿಂಚು, ಚಿಂತನ ಚಯ, ಚಿಂತನ ಬಿಂದು, ಚಿಂತನಧಾರೆ ಮುಂತಾದ ೨೨ ಚಿಂತನ ಪ್ರಬಂಧಗಳು; ಅಧ್ಯಯನ, ಆಲೋಚನೆ, ಈ ಕ್ಷಣ, ಉಪಚಯ, ಕನ್ನಡ ಕಾವ್ಯ ಹತ್ತುವರುಷ, ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ ಪ್ರಭಾವ, ಕಾವ್ಯತತ್ತ್ವ: ಕೆಲವು ಮುಖಗಳು, ಕುಮಾರ ವ್ಯಾಸ ಭಾರತ: ಒಂದು ನೋಟ, ಛಂದಸ್ಸು, ಕುವೆಂಪು ಸಾಹಿತ್ಯ: ಕೆಲವು ಮುಖಗಳು, ತೀನಂಶ್ರೀ: ಶ್ರೀಮುಖ, ನೂರು ವಿಮರ್ಶೆಗಳು ಮುಂತಾದ ೯೫ ವಿಚಾರ, ವಿಮರ್ಶೆ, ಸಂಶೋಧನ ಕೃತಿಗಳು; ಕೃತಿ ಪ್ರತಿ, ಗೀತಾಂಜಲಿ, ತಾಯಿ, ಠಾಕೂರ್ ವಚನಾಂಜಲಿ, ಎಲಿಯಟ್ಟನ ಮೂರು ಉಪನ್ಯಾಸಗಳು, ಕಲಾತತ್ತ್ವ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು ಮುಂತಾದ ಇಂಗ್ಲಿಷ್‌ನಿಂದ ಭಾಷಾಂತರಿಸಿದ ಸೃಜನಶಿಲ, ಸೃಜನೇತರ ಕೃತಿಗಳು; ಅಗಮೆಮೊನನ್, ಈಸ್ಕಲಸ್‌ನ ಎರಡು ನಾಟಕಗಳು, ಏಳು ಗ್ರೀಕ್ ನಾಟಕಗಳು, ಹೆಲೆನ್ ಮುಂತಾದ ಗ್ರೀಕ್‌ನಿಂದ (ಇಂಗ್ಲಿಷ್ ಮೂಲಕ) ಅನುವಾದಿಸಿದ ೧೪ ನಾಟಕಗಳು; ಅಭಿಜ್ಞಾನ ಶಾಕುಂತಲ, ಊರುಭಂಗ, ಕುಮಾರ ಸಂಭವ, ವೇಣಿ ಸಂಹಾರ, ಭಾಗವತ, ಭಾರತ, ರಾಮಾಯಣ ಮುಂತಾದ ಸಂಸ್ಕೃತದಿಂದ ಅನುವಾದಿಸಿದ ೨೬ ಕೃತಿಗಳು; ಇವಲ್ಲದೆ ಜಾನಪದದ ೧೪ ಕೃತಿಗಳು; ೮ ವ್ಯಕ್ತಿ ಚಿತ್ರಗಳು; ೨ ಹಾಸ್ಯ ಕೃತಿಗಳು; ೪೦ ಕ್ಕೂ ಮಿಕ್ಕು ಗ್ರಂಥ ಸಂಪಾದನೆ, ೫ ಮಕ್ಕಳ ಸಾಹಿತ್ಯ ಕೃತಿಗಳು ಸೇರಿ ಸುಮಾರು ೩೦೦ ಕೃತಿಗಳು ಪ್ರಕಟಿತ.

ನಿವೃತ್ತಿಯ ನಂತರವೂ ಹೊತ್ತ ಜವಾಬ್ದಾರಿಗಳು ಹಲವಾರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ.ದ ಪ್ರಸಾರಾಂಗದ ಗ್ರಂಥ ಪ್ರಕಟಣಾ ಸಮಿತಿ ಅಧ್ಯಕ್ಷರಾಗಿ, ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ಸಮಗ್ರವಚನ ಸಂಪುಟಗಳ ಸಂಪಾದಕ ಮಂಡಲಿ, ರಾಜ್ಯ ಗ್ರಂಥಾಲಯ ಇಲಾಖೆಯ ಗ್ರಂಥ ಖರೀದಿ ಅಯ್ಕೆ ಸಮಿತಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳಲ್ಲೂ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರಗಳನ್ನು ನೀಡಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ ೪೯ನೆಯ ಕನ್ನಡ ಸಮ್ಮೇಳನದ ಭಾಷಾಂತರ ಗೋಷ್ಠಿಯ ಅಧ್ಯಕ್ಷತೆ, ೧೯೭೧ರಲ್ಲಿ ನಾಗಮಂಡಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಟಿ. ನರಸೀಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೪ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ೧೯೯೪ರಲ್ಲಿ ಲಕ್ನೋದಲ್ಲಿ ನಡೆದ ಗಣರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, ೨೦೧೧ರಲ್ಲಿ ನಡೆದ ೭೮ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಗಂಗಾವತಿ)ದ ಅಧ್ಯಕ್ಷತೆ – ಹೀಗೆ ಹಲವಾರು ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿ ಪಡೆದ ಗೌರವ.

ಇವರ ಸಾಹಿತ್ಯದ ಬಹುಮುಖ ಕೊಡುಗೆಗಾಗಿ ಸಂದ ಪ್ರಶಸ್ತಿಗಳು ಹಲವಾರು. ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್‌ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಇನ್ನೂ ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.

೧೯೯೦ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಸಾರ್ಥಕ’.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.88 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *