ಸಿ.ಎಸ್.ಉಷಾ (೦೨.೦೪.೧೯೫೭): ಪಿಟೀಲುವಾದಕರಾಗಿ ಖ್ಯಾತಿ ಪಡೆದಿರುವ ಉಷಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ.ಎಸ್.ಸುಂದರಮ್, ತಾಯಿ ಸೀತಾ, ತಾಯಿಯೇ ಸಂಗೀತದ ಮೊದಲ ಗುರು. ಓದಿದ್ದು ಬಿ.ಎಸ್ಸಿ. ಸಂಗೀತದಲ್ಲಿ ಆಸಕ್ತಿ ಹೊಂದಿ ಪಡೆದ ಎಂ.ಎ. ಪದವಿ. ಮೊದಲ ರ್ಯಾಂಕ್ ವಿದ್ಯಾರ್ಥಿನಿ.
ಎಳೆತನದಲ್ಲಿ ಕಲಿತದ್ದು ಭರತನಾಟ್ಯವಾದರೂ ಗಾಯನ ಮತ್ತು ವಾದನದ ಕಡೆಗೆ ಸೆಳೆದ ಮನಸ್ಸು. ಪ್ರಾರಂಭಿಕ ಶಿಕ್ಷಣ ಸುಕನ್ಯ, ಭೀಮಾಚಾರ್, ಆರ್. ರಾಜಲಕ್ಷ್ಮಿ ಮತ್ತು ಎಸ್.ಶೇಷಗಿರಿರಾವ್ರವರಲ್ಲಿ. ಜ್ಯೂನಿಯರ್ ಮತ್ತು ಸೀನಿಯರ್ ಗ್ರೇಡ್ಗಳಲ್ಲಿ ರ್ಯಾಂಕ್ ವಿದ್ಯಾರ್ಥಿನಿ. ಮುಂದವರೆದ ಶಿಕ್ಷಣ ಕ್ಕಾಗಿ ಸೇರಿದ್ದು ಬೆಂಗಳೂರು ವಿಶ್ವವಿದ್ಯಾಲಯ ಪಿಟೀಲು ವಾದನ ಕಲಿಯಲು ಅರ್ಜಿ ಹಾಕಿದ ಏಕೈಕ ವಿದ್ಯಾರ್ಥಿನಿ. ಪ್ರಾರಂಭಿಕ ಸ್ಥಿತಿಯಲ್ಲಿ ಪಿಟೀಲು ಕಲಿಯಲು ತಕ್ಕ ವ್ಯವಸ್ಥೆಯಿಲ್ಲದೆ ಗಾಯನ ಕಲಿಕೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಡನೆ ಶಿಕ್ಷಣ ಕಲಿತದ್ದನ್ನು ಪಿಟೀಲಿನಲ್ಲಿ ಪ್ರಯೋಗ. ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ (ಪಿಟೀಲಿನಲ್ಲಿ) ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ. ಉತ್ತಮಶ್ರೇಣಿಯ ಸಾಧನೆಗಾಗಿ ಕರ್ನಾಟಕ ನೃತ್ಯ ಅಕಾಡಮಿಯಿಂದ ದೊರೆತ ಶಿಷ್ಯವೇತನ. ಅಂತರ ಕಾಲೇಜು ಸಂಗೀತ ಸ್ಪರ್ಧೆಗಳಲ್ಲಿ ಪಡೆದ ಹಲವಾರು ಬಹುಮಾನಗಳು. ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ದೊರೆತ ’ಅತ್ಯುತ್ತಮ ಪಿಟೀಲುವಾದಕಿ’ ಪ್ರಶಸ್ತಿ, ಹಲವಾರು ಬಹುಮಾನಗಳು.
ಎಸ್. ಶೇಷಗಿರಿರಾವ್ರೊಂದಿಗೆ ಪಿಟೀಲು ಸಹವಾದಕರಾಗಿ ನೀಡಿದ ಹಲವಾರು ಕಾರ್ಯಕ್ರಮಗಳು. ಕರ್ನಾಟಕ ಗಾನಕಲಾ ಪರಿಷತ್, ಹಂಪಿ ಉತ್ಸವ, ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯ ಯುವಜನ ಸಂಗೀತೋತ್ಸವ, ತಿರುವನಂತಪುರದ ದಕ್ಷಿಣ ಭಾರತ ಸಂಗೀತೋತ್ಸವ, ಮದರಾಸು ಮ್ಯೂಸಿಕ್ ಅಕಾಡಮಿ, ಗುರುವಾಯೂರಿನ ಚೆಂಬೈ ಆರಾಧನಾಮಹೋತ್ಸವ ಮುಂತಾದಡೆಗಳಲ್ಲಿ ನೀಡಿದ ಸ್ವತಂತ್ರ ಕಾರ್ಯಕ್ರಮಗಳು, ನಾಡಿನ ಪ್ರಖ್ಯಾತ ಕಲಾವಿದರಿಗೆ ಪಿಟೀಲು ಪಕ್ಕವಾದ್ಯ, ಪಿಟೀಲು ತನಿ ಕಾರ್ಯಕ್ರಮಗಳಲ್ಲಿ ಗಳಿಸಿದ ಮನ್ನಣೆ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.