ಸಿ.ಎನ್ . ಮುಕ್ತಾ (೩೦.೪.೧೯೫೧): ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್. ಮುಕ್ತಾರವರು ಹುಟ್ಟಿದ್ದು ಚಿತ್ರದುರ್ಗದಲ್ಲಿ ೧೯೫೧ ರ ಏಪ್ರಿಲ್ ೩೦ ರಂದು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು, ಇವರ ಅಣ್ಣನೇ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ತಂದೆಯ ತಾಯಿಯ ಅಣ್ಣನವರೇ ‘ಕೆಲವು ನೆನಪುಗಳು’ ಕರ್ತೃ ನವರತ್ನ ರಾಮರಾಯರು. ಮುಕ್ತಾರವರ ತಾಯಿ ಕಮಲಮ್ಮ.
[sociallocker]
ಪ್ರಾರಂಭಿಕ ಶಿಕ್ಷಣ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೆ.ಆರ್. ನಗರಗಳಲ್ಲಿ. ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಸರಕಾರಿ ಕಾಲೇಜಿನಿಂದ ಪಡೆದ ಬಿ.ಎಡ್. ಪದವಿಗಳು. ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಉಪಾಧ್ಯಾಯಿನಿಯಾಗಿ. ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ.
ಪ್ರೈಮರಿ ಶಾಲೆಯಲ್ಲಿದ್ದಾಗಲೇ ನೀತಿ ಪಾಠದ ತರಗತಿಯಲ್ಲಿ ಚನ್ನಬಸವಯ್ಯ ಎಂಬ ಮಾಸ್ತರು ಕಾದಂಬರಿಗಳನ್ನು ತಂದು, ಕಣ್ಣಿಗೆ ಕಟ್ಟುವಂತೆ ರಸವತ್ತಾಗಿ ಮಾಡುತ್ತಿದ್ದ ವರ್ಣನೆಗಳಿಂದ ಪ್ರಭಾವಿತರಾಗಿ ಸಾಹಿತ್ಯದ ಕಡೆ ಒಲವು ಬೆಳೆಯತೊಡಗಿತು. ಮಾಸ್ತರಿಂದ ಪಡೆದು ಮೊದಲು ಓದಿದ ಕಾದಂಬರಿ ತ.ರಾ.ಸು. ರವರ ಚಂದವಳ್ಳಿಯ ತೋಟ . ಹೈಸ್ಕೂಲಿಗೆ ಬಂದಾಗಲೂ ಕಾದಂಬರಿ ಓದುವ ಹವ್ಯಾಸ ಮುಂದುವರೆಯಿತು. ಇಲ್ಲಿ ಪ್ರೋತ್ಸಾಹ ನೀಡಿದವರು ಕನ್ನಡ ಪಂಡಿತೆ ನಾಗಲಕ್ಷ್ಮಮ್ಮನವರು. ಮುಂದೆ ರವೀಂದ್ರನಾಥ ಠಾಕೂರ್, ಶರಶ್ಚಂದ್ರರ ಕಾದಂಬರಿಗಳ ಅನುವಾದಗಳನ್ನೆಲ್ಲಾ ಓದಿದರು. ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದ ಬಿ.ಎಸ್. ರುಕ್ಕಮ್ಮನವರಿಂದ ಪ್ರೇರಿತರಾಗಿ ಚಿತ್ರದುರ್ಗದ ಇತಿಹಾಸದ ಕಾದಂಬರಿಗಳನ್ನು ಓದಿದರು. ಚಿಕ್ಕಹುಡುಗಿಯಾಗಿದ್ದಾಗಲೇ ನವರತ್ನ ರಾಮರಾಯರು ‘ಕೆಲವು ನೆನಪುಗಳು’ ಪುಸ್ತಕ ಕೊಟ್ಟು ಇವರಲ್ಲಿ ಸಾಹಿತ್ಯಾಭಿಲಾಷೆ ಚಿಗುರುವಂತೆ ಮಾಡಿದ್ದರು.
ಹೀಗೆ ಓದುತ್ತಾ ಹೋದಂತೆಲ್ಲಾ ಬರೆಯಬೇಕೆಂಬ ತುಡಿತ ಪ್ರಾರಂಭವಾದಾಗ ಅಕ್ಕ, ಪದ್ಮಜಾ ಸುಂದರೇಶ್ ರವರ ‘ಅನಿರೀಕ್ಷಿತ’ ಕಾದಂಬರಿಯು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಇವರಿಗೂ ಕಾದಂಬರಿ, ಕಥೆಗಳನ್ನು ಏಕೆ ಬರೆಯಬಾರದೆನ್ನಿಸಿ ಬರೆದ ಮೊದಲ ಕಾದಂಬರಿ ‘ಆಶ್ರಯ’, ಪ್ರಜಾಮತ ಪತ್ರಿಕೆಗೆ ಕಳುಹಿಸಿದಾಗ , ಸಂಪಾದಕರಾಗಿದ್ದ ಮ.ನ. ಮೂರ್ತಿಯವರು ಓದಿ, ಪ್ರಶಂಸಿಸಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಬರೆದ ಹಲವಾರು ಕಥೆಗಳು ಮಲ್ಲಿಗೆ, ಸುಧಾ ಮುಂತಾದ ವಾರಪತ್ರಿಕೆಗಳಲ್ಲೂ ಪ್ರಕಟವಾಗತೊಡಗಿತು.
ಅನಾವರಣ, ಅಪರಿಚಿತರು, ಅಸ್ವೀಕೃತರು, ಅನುರಾಗ ತಂದ ಅನುಬಂಧ ಮುಂತಾದ ೫೦ ಕ್ಕೂ ಹೆಚ್ಚು ಕಾದಂಬರಿಗಳು, ೮ ಕಿರುಕಾದಂಬರಿಗಳು ಪ್ರಕಟಗೊಂಡಿದ್ದು ಇವುಗಳಲ್ಲಿ ಸುಧಾವಾರಪತ್ರಿಕೆ, ಗೆಳತಿ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಮಂಜುವಾಣಿ, ವನಿತಾ, ಮಂಗಳ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ೧೫ ಕ್ಕೂ ಹೆಚ್ಚು ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಂಡಿವೆ.
ಸುಖದಸೋಪಾನ, ಕ್ಷಮಯಾಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಗೆಲುವಿನ ಹೆಜ್ಜೆ, ಅಮೃತಮಯಿ, ಮೌನರಾಗ ಮುಂತಾದ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದ್ದರೆ ಕಿರುಚಿತ್ರಗಳಾಗಿ ಸೆಳೆತ, ಪಾಲು, ಮುಖವಾಡ, ತಾಯಿಕರುಳು ಕಾದಂಬರಿಗಳು ಪ್ರಸಿದ್ಧಿ ಪಡೆದ ಕಾದಂಬರಿಗಳು.
ವಿಮುಕ್ತೆ ಮತ್ತು ಮೇಘಮಂದಾರ ಕಾದಂಬರಿಗಳು ‘ದೋಣಿಸಾಗಲಿ’ (ನಿರ್ದೇಶನ-ರಾಜೇಂದ್ರಸಿಂಗ್ ಬಾಬು) ಮತ್ತು ‘ಮಿಸ್ ಕ್ಯಾಲಿಫೋರ್ನಿಯ’ (ನಿರ್ದೇಶನ-ಕೋಡ್ಲು ರಾಮಕೃಷ್ಣ) ಎಂಬ ಹೆಸರಿನಿಂದ ಚಲನಚಿತ್ರಗಳಾಗಿವೆ.
ಇವರ ಸಣ್ಣ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿದ್ದು, ವರ್ತುಲ, ಆವರಣ, ಸುಳಿ, ವೃತ್ತಗಳು, ಆವರ್ತನ, ನಮ್ಮನಮ್ಮೊಳಗೆ, ಮೂರು ಮುಷ್ಠಿಯ ಬದುಕು ಮುಂತಾದ ಕಥಾಸಂಕಲನಗಳಲ್ಲಿ ಸೇರಿವೆ. ಒಂದು ಪ್ರಬಂಧ ಸಾಹಿತ್ಯವಲ್ಲದೆ ಮಕ್ಕಳಿಗಾಗಿ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿಯೂ ತೊಡಗಿಸಿ ಕೊಂಡಿದ್ದು ೮೦ ಕ್ಕೂ ಹೆಚ್ಚು ಕೃತಿ ರಚಿಸಿರುವ ಸಿ.ಎನ್. ಮುಕ್ತಾರವರಿಗೆ ಆರ್ಯಭಟ ಪ್ರಶಸ್ತಿ, ಅತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.