ಶ್ಲೋಕ – 31
ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾSಯಮವ್ಯಯಃ ।
ಶರೀರಸ್ಥೋSಪಿ ಕೌಂತೇಯ ನ ಕರೋತಿ ನ ಲಿಪ್ಯತೇ ॥೩೧॥
ಅನಾದಿತ್ವಾತ್ ನಿರ್ಗುಣತ್ವಾತ್ ಪರಮ ಆತ್ಮಾ ಅಯಮ್ ಅವ್ಯಯಃ ।
ಶರೀರಸ್ಥಃ ಅಪಿ ಕೌಂತೇಯ ನ ಕರೋತಿ ನ ಲಿಪ್ಯತೇ –ಕೌಂತೇಯ, ಪರಮಾತ್ಮ ಎಂದೂ ಹುಟ್ಟದವನು; ಗುಣಗಳು ಅಂಟದವನು; ಅದರಿಂದ ಅವನಿಗೆ ಅಳಿವೂ ಇಲ್ಲ. ಅವನು ದೇಹದೊಳಗಿದ್ದೂ ಏನನ್ನೂ ಮಾಡುವುದಿಲ್ಲ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.[ಅಳಿವಿರದ ಈ ಪರಮಾತ್ಮ ಸಂಸಾರಿ ಜೀವನಲ್ಲ; ಜಡದ ಮಾತೇನು! ಅವನು ಎಲ್ಲವನ್ನೂ ಮಾಡುತ್ತಾನೆ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.]
ನಿರ್ವೀಕಾರನಾಗಿರುವ ಏಕಮೇವ ವಸ್ತು ಎಂದರೆ ಭಗವಂತ. ಆತ ಎಂದೂ ಯಾವ ಕಾರಣ ವಿಶೇಷದಿಂದ ಕೂಡ ಹುಟ್ಟಿಲ್ಲ. ಭಗವಂತ ತ್ರೈಗುಣ್ಯವರ್ಜಿತ. ಇದರಿಂದ ಆತ ಎಂದೂ ಬದಲಾವಣೆಗೆ, ವಿಕಾರಕ್ಕೆ ಒಳಪಡುವುದಿಲ್ಲ. ಭಗವಂತ ಎಲ್ಲ ಜೀವರೊಳಗೆ ಬಿಂಬರೂಪನಾಗಿದ್ದರೂ ಕೂಡ ಆತನಿಗೆ ದೇಹದ ಬದ್ಧತೆ ಇಲ್ಲ. ಆತ ಎಲ್ಲವನ್ನು ನಮ್ಮಿಂದ ಮಾಡಿಸುತ್ತಾನೆ ಆದರೆ ಏನನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ನಿರ್ಲಿಪ್ತನಾಗಿ ಎಲ್ಲವನ್ನೂ ಮಾಡುತ್ತಾನೆ ಆದರೆ ಯಾವುದರ ಲೇಪವೂ ಆತನಿಗಿಲ್ಲ. ಇದು ಯಾವ ರೀತಿ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ- ಕೃಷ್ಣ ಒಂದು ಉದಾಹರಣೆಯನ್ನು ಕೊಟ್ಟು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.