ಶ್ಲೋಕ – 09
ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ ।
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥೯॥
ಮತ್ ಚಿತ್ತಾಃ ಮತ್ ಗತ ಪ್ರಾಣಾಃ ಬೋಧಯಂತಃ ಪರಸ್ಪರಮ್ ।
ಕಥಯಂತಃ ಚ ಮಾಮ್ ನಿತ್ಯಮ್ ತುಷ್ಯಂತಿ ಚ ರಮಂತಿ ಚ –-ಅನುಗಾಲ ನನ್ನಲ್ಲೆ ಬಗೆಯಿಟ್ಟವರು , ನನಗಾಗಿ ಬದುಕುವವರು, ನನ್ನನ್ನೇ ಒಬ್ಬರಿಗೊಬ್ಬರು ತಿಳಿಹೇಳುತ್ತ, ತಿಳಿಯುತ್ತ ತಣಿಯುತ್ತಾರೆ; ಸಂತಸಪಡುತ್ತಾರೆ.
ಹೀಗೆ ನಿಜವಾದ ಜ್ಞಾನ ಭಕ್ತಿ ಉಳ್ಳವರ ಚಿತ್ತದಲ್ಲಿ ಸದಾ ಭಗವಂತನ ಚಿಂತನವೇ ತುಂಬಿರುತ್ತದೆ. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತದೆ. ಅವರಿಗೆ ಎಲ್ಲವುದರಲ್ಲೂ ಭಗವಂತನೇ ಕಾಣುತ್ತಾನೆ. ಇವರು ಪ್ರತೀ ಘಟನೆಯ ಹಿಂದೆ ಭಗವಂತನಿದ್ದಾನೆ, ಅವನ ಇಚ್ಛೆಯಂತೆ ಎಲ್ಲವೂ ನೆಡೆಯತ್ತಿದೆ ಎನ್ನುವ ಅರಿವಿನಲ್ಲಿ ಬದುಕುತ್ತಾರೆ. ಇವರ ಮನಸ್ಸು ಭಗವಂತನಲ್ಲಿ ಶ್ರುತಿಗೂಡಿರುತ್ತದೆ. ಇವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿರುತ್ತಾರೆ. ಒಂದೊಂದು ಸಂಗತಿಯಲ್ಲೂ ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’ ಎನ್ನುವಂತೆ ಇವರು ವಿಶ್ಲೇಷಣೆ ಮಾಡುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಇವರು ಭಗವಂತನ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಾರೆ. ಇಂತವರ ಜೀವನ ಆನಂದಮಯವಾಗಿರುತ್ತದೆ. ಇವರಲ್ಲಿ ಕೆಟ್ಟ ಯೋಚನೆ ಸುಳಿಯುವುದಿಲ್ಲ. ಇವರ ಮನಸ್ಸು ಸದಾ ನಿರ್ಮಲವಾಗಿರುತ್ತದೆ. ಇವರು ಲೋಕ ವ್ಯವಹಾರದ ಮಾತನ್ನು ಬಿಟ್ಟು, ಭಗವಂತನ ವಿಚಾರ ಮಾತನಾಡುತ್ತಾ ಸದಾ ಆನಂದಪಡುತ್ತಿರುತ್ತಾರೆ.