ಶ್ಲೋಕ – 27
ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ ॥೨೭॥
ಸರ್ವಾಣಿ ಇಂದ್ರಿಯ ಕರ್ಮಾಣಿ ಪ್ರಾಣಕರ್ಮಾಣಿ ಚ ಅಪರೇ ।
ಆತ್ಮ ಸಂಯಮ ಯೋಗ ಅಗ್ನೌ ಜುಹ್ವತಿ ಜ್ಞಾನದೀಪಿತೇ-ಕೆಲವರು ಎಲ್ಲ ಇಂದ್ರಿಯ ಕ್ರಿಯೆಗಳನ್ನೂ, ಪ್ರಾಣವಾಯುವಿನ ಕ್ರಿಯೆಗಳನ್ನೂ ತಿಳಿವಿನಿಂದ ತಿಳಿಗೊಂಡ ಆತ್ಮನಿಗ್ರಹದ ಸಾಧನೆಯೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ.
ನಮ್ಮ ದೇಹದಲ್ಲಿ ಜ್ಞಾನೇಂದ್ರಿಯ ಹಾಗು ಕರ್ಮೇಂದ್ರಿಯದಿಂದ ನಿರಂತರ ಕ್ರಿಯೆ ನಡೆಯುತ್ತಿರುತ್ತದೆ. ಇದಲ್ಲದೆ ಪ್ರಾಣ ಶಕ್ತಿಯಿಂದ ಆಗುವ ಕ್ರಿಯೆಗಳು ಅನೇಕ (ಉದಾ: ಉಸಿರಾಟ, ಬಲ, ಸಂತಾನಶಕ್ತಿ, ಸಂತೋಷ ಅಥವಾ ದುಃಖವಾದಾಗ ಕಣ್ಣೀರು ಇತ್ಯಾದಿ). ಮನೋನಿಗ್ರಹ ಎನ್ನುವ ಅಗ್ನಿಯಲ್ಲಿ ಈ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮತ್ತು ಪ್ರಾಣಶಕ್ತಿಯಿಂದ ಆಗುವ ಕ್ರಿಯೆಯನ್ನು ಹೋಮಿಸುವುದು(ಹಿಡಿತ) ಒಂದು ಯಜ್ಞ. ಇದು ಹಠಕ್ಕೊಸ್ಕರ ಅಲ್ಲ, ಯಜ್ಞ ರೂಪವಾಗಿ ಭಗವಂತನ ಪೂಜಾರೂಪವಾಗಿ. ಇದು ಭಗವಂತನ ಅರಿವಿನಿಂದ ಬೆಳಗುವ ಆತ್ಮ ಸಂಯಮ. ಭಗವಂತನ ಅರಿವಿಗೊಸ್ಕರ ಮಾಡಿದ ಆತ್ಮ ಸಂಯಮ; ಭಗವಂತನ ಅರಿವಿನೆಡೆಗೆ ಕೊಂಡೊಯ್ಯುವ ಜ್ಞಾನಪೂರ್ವಕ ಸಂಯಮ, ಆವೇಶವಲ್ಲ.
ಯಜ್ಞಗಳ ವೈವಿದ್ಯವನ್ನು ಹೇಳುತ್ತಾ ಮುಂದುವರಿದು ಕೃಷ್ಣ ಯಜ್ಞದ ಒಂದು ಪಟ್ಟಿಯನ್ನು ನಮ್ಮ ಮುಂದಿಡುತ್ತಾನೆ: