ಶ್ಲೋಕ – 23
ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ ।
ಯಜ್ಞಾಯಾSಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ॥೨೩॥
ಗತ ಸಂಗಸ್ಯ ಮುಕ್ತಸ್ಯ ಜ್ಞಾನ ಅವಸ್ಥಿತ ಚೇತಸಃ |
ಯಜ್ಞಾಯ ಆಚರತಃ ಕರ್ಮ ಸಮಗ್ರಮ್ ಪ್ರವಿಲೀಯತೇ -ಫಲದ ನಂಟು ತೊರೆದು, ದೇಹಾಭಿಮಾನ ತೊರೆದು, ಭಗವಂತನ ಅರಿವಿನಲ್ಲೆ ಬಗೆನೆಟ್ಟು, ಪೂಜೆಯೆಂದು ಮಾಡುವವನ ಎಲ್ಲಾ ಕರ್ಮ ಲಯಗೊಳ್ಳುತ್ತದೆ.
ಈ ಶ್ಲೋಕದಲ್ಲಿ ಮೇಲೆ ಹೇಳಿದ ಎಲ್ಲಾ ವಿಷಯವನ್ನು ಉಪಸಂಹಾರ ರೂಪದಲ್ಲಿ ಭಗವಂತ ನಮ್ಮ ಮುಂದಿಟ್ಟಿದ್ದಾನೆ.
ಫಲದ ಬಗ್ಗೆ ಅತಿಯಾದ ಆಸೆ ಇಟ್ಟುಕೊಳ್ಳಬೇಡ; ಅತಿಯಾದ ನಿರೀಕ್ಷೆ ಬೇಡ; ಕರ್ತವ್ಯ ನಿಷ್ಠೆ ಇರಲಿ; ದೇಹಾಭಿಮಾನ, ಪರಿವಾರದ ಅಭಿಮಾನವನ್ನು ತೊರೆದು ನಿರ್ಲಿಪ್ತನಾಗಿ ಬದುಕಲು ಕಲಿ; ಮನಸ್ಸನ್ನು ಜ್ಞಾನಸ್ವರೂಪನಾದ ಭಗವಂತ(ಚೇತಸ್ಸು)ನಲ್ಲಿ ನೆಲೆಗೊಳಿಸು. ಹೀಗೆ ಬದುಕಿದಾಗ ನಾವು ಮಾಡುವ ಕರ್ಮವೆಲ್ಲವೂ ಯಜ್ಞವಾಗಿ ಯಜ್ಞ ನಾಮಕ ಭಗವಂತನನ್ನು ಸೇರುತ್ತದೆ ಹಾಗು ಜ್ಞಾನದ ಬೆಂಕಿಯಲ್ಲಿ ಕರ್ಮದ ಕೊಳೆ ಸುಟ್ಟುಹೋಗುತ್ತದೆ.