ಶ್ಲೋಕ – 10
ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥೧೦॥
ವೀತ ರಾಗ ಭಯ ಕ್ರೋಧಾಃ ಮತ್ ಮಯಾ ಮಾಮ್ ಉಪಾಶ್ರಿತಾಃ |
ಬಹವಃ ಜ್ಞಾನ ತಪಸಾ ಪೂತಾಃ ಮತ್ ಭಾವಮ್ ಆಗತಾಃ — ರಾಗ-ಭಯ-ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು(ನನ್ನ ಹಿರಿಮೆಯನ್ನು ಅರಿತವರು) ನನಗೆ ಶರಣು ಬಂದವರು ಬಹಳ ಮಂದಿ ತಿಳಿವಿನ ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ.
ಮೂರನೇ ಅಧ್ಯಾಯದ ಕೊನೆಯಲ್ಲಿ(ಶ್ಲೋಕ-39) ಕೃಷ್ಣ ಹೇಳಿದಂತೆ ರಾಗ ದ್ವೇಷಾದಿಗಳು ನಮ್ಮ ಪರಮ ಶತ್ರುಗಳು. ನಾವು ನಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಕಾರಣವಾದ ಒಲವು(ಆಸೆ,ರಾಗ, Attachment), ಅಂಜಿಕೆ (ಭಯ) ಮತ್ತು ಕೋಪ(ಸಿಟ್ಟು)ವನ್ನು ತೊರೆದು, ಏನು ಇದೆಯೋ ಅದರಲ್ಲಿ ಸಂತೋಷಪಡುವುದನ್ನು ಮತ್ತು ಏನು ಬಂತೋ ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ಮನ್ಮಯರಾಗಬೇಕು. ‘ಮನ್ಮಯ’ ಅಂದರೆ ಜೀವನದ ಎಲ್ಲಾ ನಡೆಗಳಲ್ಲಿ ಭಗವಂತನನ್ನು ತುಂಬಿಸಿಕೊಳ್ಳುವುದು ಮತ್ತು ಲೌಕಿಕ ಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳುವುದು. ಒಮ್ಮೆ ನಾವು ಭಗವಂತನ ಚಿಂತನೆಯಲ್ಲಿ ತೊಡಗಿದಾಗ ಈ ರಾಗ-ದ್ವೇಷಗಳು ಕ್ಷುಲ್ಲಕವಾಗಿ ಕಾಣಲಾರಭಿಸುತ್ತವೆ. ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು, ನಮ್ಮ ರಕ್ಷಣೆಗೆ ಸದಾ ಆತನಿದ್ದಾನೆ ಎಂದು ತಿಳಿದು, ದುರಾಭಿಮಾನವನ್ನು ಕಿತ್ತೆಸೆದು, ಆ ಭಗವಂತನಲ್ಲಿ ಶರಣಾದವರು ಮೋಕ್ಷ ಮಾರ್ಗವನ್ನು ಕಾಣುತ್ತಾರೆ. ನಮ್ಮ ಜೀವನದ ಪ್ರತಿಯೊಂದು ಕರ್ಮದಲ್ಲಿ ಈ ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಒಂದು ತಪಸ್ಸು. ಇದರಿಂದ ನಮ್ಮ ಬದುಕು ಪವಿತ್ರವಾಗುತ್ತದೆ. ಹೀಗೆ ರಾಗ-ದ್ವೇಷದ ಕೊಳೆಯಿಂದ ಮುಕ್ತರಾದವರು ನನ್ನನ್ನು ಸೇರುತ್ತಾರೆ ಎನ್ನುತ್ತಾನೆ ಕೃಷ್ಣ. ನಾವು ನಮ್ಮ ರಾಗ ದ್ವೇಷ-ಕ್ರೋಧದಲ್ಲಿ ಕೂಡಾ ಭಗವಂತನನ್ನು ಕುಳ್ಳಿರಿಸಿಕೊಳ್ಳಬೇಕು! ನಮ್ಮ ಆಸೆ-ಭಗವಂತನನ್ನು ಕಾಣವ ಆಸೆಯಾಗಿರಬೇಕು; ಭಯ-‘ತಪ್ಪು ಮಾಡಿದರೆ ಭಗವಂತ ನನ್ನನ್ನು ಕ್ಷಮಿಸಲಾರ’ ಎನ್ನುವ ಭಯವಾಗಿಬೇಕು; ನಮ್ಮ ಇಲ್ಲ ಸಲ್ಲದ ಇಂದ್ರಿಯಾಕಾಂಕ್ಷೆಗಳ ಮೇಲೆ ನಮ್ಮ ಕೊಪವಿರಬೇಕು. ಹೀಗೆ ಈ ಮೂರು ಶತ್ರುಗಳನ್ನು ನಾವು ಭಗವಂತನ ಪರಗೊಳಿಸಿದಾಗ ಭಗವಂತನನ್ನು ಕಾಣಲು ಸಾಧ್ಯ.