ಶ್ಲೋಕ – 32
ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಮ್।
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿನಷ್ಟಾನಚೇತಸಃ ॥೩೨॥
ಯೇ ತು ಏತತ್ ಅಭ್ಯಸೂಯಂತಃ ನ ಅನುತಿಷ್ಠಂತಿ ಮೇ ಮತಮ್ ।
ಸರ್ವ ಜ್ಞಾನ ವಿಮೂಢಾನ್ ತಾನ್ ವಿದ್ಧಿ ನಷ್ಟಾನ್ ಅಚೇತಸಃ -ಯಾರು ಕಿಚ್ಚಿನಿಂದ ನನ್ನ ಸಿದ್ದಾಂತವನ್ನು ಆಚರಣೆಗೆ ತರುವುದಿಲ್ಲ ಅವರು ಎಲ್ಲ ತಿಳಿವಿಗೂ ಎರವಾದವರು. ವಿನಾಶದತ್ತ ಸರಿವ ತಿಳಿಗೇಡಿಗಳು-ಎಂದು ತಿಳಿ.
ಮೇಲೆ ಹೇಳಿದ ಅನುಷ್ಠಾನವನ್ನು ಅರಿಯದೆ, ಅಸೂಯೆ-ಅಸಹನೆಯಿಂದ, ‘ನನ್ನ ಕೆಲಸಕ್ಕೆ ನಾನೊಬ್ಬನೇ ಜವಾಬ್ದಾರ, ನಾನು ಮಾಡುವುದು ನನ್ನ ಸ್ವಂತ ಹಿತಾಸಕ್ತಿಗಾಗಿ, ಅದರ ಫಲವನ್ನು ನಾನು ಪಡೆಯುತ್ತೇನೆ, ನನ್ನ ಕೈಯಲ್ಲಿ ನನ್ನ ಅಸ್ತಿತ್ವವಿದೆ, ಯಾವ ದೇವರೂ ಅದಕ್ಕೆ ಹೊಣೆಗಾರನಲ್ಲ’ ಎಂದು ಅಭಿಪ್ರಾಯ ತೋರಿ ಅಹಂಕಾರದಿಂದ ಬದುಕುವವರಿಗೆ ಎಂದೂ ಅರಿವಿನ ಬಾಗಿಲು ತೆರೆಯುವುದಿಲ್ಲ. ಆತ ಪ್ರಪಂಚದಲ್ಲಿ ವಿಮೂಢ(ಶ್ರೇಷ್ಠ ದಡ್ಡ)ಎನಿಸುತ್ತಾನೆ. ಆತನಿಗೆ ‘ತನಗೆ ಏನೂ ಗೊತ್ತಿಲ್ಲ ಎನ್ನುವ ವಿಷಯವೂ ಗೊತ್ತಿರುವುದಿಲ್ಲ!’ ಇಂತವರಿಗೆ ಸತ್ಯದ ಬಗ್ಗೆ ಚಿಂತನೆ ಮಾಡುವ ಅರ್ಹತೆ ಇರುವುದಿಲ್ಲ. ಅಂತವರು ವಿನಾಶದತ್ತ ನಡೆಯುವ ತಿಳಿಗೇಡಿಗಳು. ಅವರು ಕತ್ತಲಿನಿಂದ ಕತ್ತಲಿಗೆ ಹೋಗುತ್ತಾ ಅಧಃಪಾತವನ್ನು ತಲುಪಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ.
ಕೃಷ್ಣನ ಈ ಮೇಲಿನ ಸಂದೇಶವನ್ನು ಕೇಳಿದಾಗ ನಮಗೊಂದು ಪ್ರಶ್ನೆ ಬರುತ್ತದೆ. ಜಗತ್ತಿನ ಮೂಲಭೂತವಾದ ಈ ಸತ್ಯವನ್ನು ಏಕೆ ಎಲ್ಲರೂ ಅನುಸರಿಸುವುದಿಲ್ಲ? ಎಂದು. ಇದಕ್ಕೆ ತುಂಬಾ ರೋಚಕವಾದ ಉತ್ತರವನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ಕೊಡುತ್ತಾನೆ.