ಶ್ಲೋಕ – 31
ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ ।
ಶ್ರದ್ಧಾವಂತೋsನಸೂಯಂತೋ ಮುಚ್ಯಂತೇ ತೇsಪಿ ಕರ್ಮಭಿಃ ॥೩೧॥
ಯೇ ಮೇ ಮತಮ್ ಇದಮ್ ನಿತ್ಯಮ್ ಅನುತಿಷ್ಠಂತಿ ಮಾನವಾಃ ।
ಶ್ರದ್ಧಾವಂತಃ ಅನಸೂಯಂತಃ ಮುಚ್ಯಂತೇ ತೇ ಅಪಿ ಕರ್ಮಭಿಃ -ಯಾವ ಮನುಷ್ಯರು ಕಿಚ್ಚು ಪಡದೆ ನನ್ನ ಈ ಸಿದ್ದಾಂತವನ್ನು ನಂಬಿ ನಡೆಯುವರೋ ಅವರು ಕರ್ಮಗಳಿಂದ ಪಾರಾಗುತ್ತಾರೆ.
“ಎಲ್ಲವನ್ನು ಭಗವಂತ ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ನಾನು ಮಾಡುವುದೆಲ್ಲವೂ ಅವನ ಪೂಜೆ, ನನಗೆ ಯಾವ ಫಲದಿಂದ ಒಳಿತು ಎನ್ನುವುದು ನನಗಿಂತ ಭಗವಂತನಿಗೆ ಚನ್ನಾಗಿ ತಿಳಿದಿದೆ. ಆದ್ದರಿಂದ ಫಲದಲ್ಲಿ ಅಧಿಕಾರ ಬಯಸದೇ ಬಂದಿದ್ದನ್ನು ಭಗವಂತನ ಪ್ರಸಾದ ಎಂದು ಸ್ವೀಕರಿಸಿ ಬದುಕುವುದು”. ಇದು ನಮ್ಮ ಜೀವನದ ನಿತ್ಯಾನುಷ್ಠಾನದ ಪರಿಯಾಗಬೇಕು. ಜೀವನದ ಪ್ರತಿ ಕ್ಷಣದಲ್ಲೂ ಈ ಅನುಸಂಧಾನವಿರುವ ಮಾನವರು(Human being, ಜ್ಞಾನಿಗಳು, ಮನುಷ್ಯತ್ವ ಉಳ್ಳವರು) ಅಶ್ರದ್ಧೆ(ರಾಜಸ) ಹಾಗು ಅಸೂಯೆ(ತಾಮಸ) ತೊರೆದು ನಿಷ್ಕಾಮಕರ್ಮ ಮಾಡಿದಾಗ, ಅವರ ಜ್ಞಾನ ವೃದ್ಧಿಯಾಗುತ್ತದೆ. ಅದರಿಂದ ಅವರು ಕರ್ಮ ಬಂಧನವನ್ನು ಕಳಚಿಕೊಂಡು ಮೋಕ್ಷಕ್ಕೆ ಹೋಗಲು ಅರ್ಹರಾಗುತ್ತಾರೆ. ನಿತ್ಯಾನುಷ್ಠಾನದಲ್ಲಿ ಈ ಅನುಸಂದಾನವಿದ್ದಾಗ ನಮ್ಮ ಕರ್ಮವೇ ನಮ್ಮನ್ನು ಕರ್ಮ ಬಂಧನದಿಂದ ಕಳಚುವುದಕ್ಕೆ ಮೆಟ್ಟಿಲಾಗುತ್ತದೆ ಹಾಗು ಕರ್ಮ ಬಂಧನದಿಂದ ಪಾರು ಮಾಡುತ್ತದೆ.