ಶ್ಲೋಕ – 20
ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ ।
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ ॥೨೦॥
ಕರ್ಮಣಾ ಏವ ಹಿ ಸಂಸಿದ್ಧಿಮ್ ಅಸ್ಥಿತಾಃ ಜನಕ ಅದಯಃ ಲೋಕಸಂಗ್ರಹಮ್ ಏವ ಅಪಿ ಸಂಪಶ್ಯನ್ ಕರ್ತುಮ್ ಅರ್ಹಸಿ -ಕರ್ಮದಿಂದಲೆ ಸಾಧಿಸಿ ಜನಕ ಮೊದಲಾದವರು ಗುರಿ ಮುಟ್ಟಿದರು. ಜನತೆಯನ್ನು ತಿದ್ದುವ ಹೊಣೆಯನ್ನರಿತಾದರೂ ನೀನು ಕರ್ಮ ಮಾಡಬೇಕಾಗಿದೆ.
ಹಿಂದಿನ ಅನೇಕ ರಾಜರ್ಷಿಗಳು ಈ ಮಾರ್ಗದಲ್ಲಿ ನಡೆದು ಮೋಕ್ಷ ಪಡೆದಿದ್ದಾರೆ. ಅವರ್ಯಾರೂ ಎಲ್ಲವನ್ನು ತ್ಯಜಿಸಿ ಕಾಡಿಗೆ ಹೋಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜನಕ ಮಹಾರಾಜ. ಈತ ಎಲ್ಲಾ ರಾಜ್ಯ ವೈಭೋಗದೊಂದಿಗೆ ರಾಜ್ಯಭಾರ ಮಾಡಿದ ವ್ಯಕ್ತಿ. ಆದರೆ ಅವನಷ್ಟು ದೊಡ್ಡ ಜ್ಞಾನಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ಅಂಥಹ ಮಹಾ ರಾಜರ್ಷಿ ಆತ. ಶುಖಾಚಾರ್ಯರು ವೈರಾಗ್ಯದ ಬಗ್ಗೆ ಸರಿಯಾದ ತಿಳುವಳಿಕೆಗಾಗಿ ಜನಕನಲ್ಲಿಗೆ ಬಂದಿದ್ದರು! ಇದು ನಿಜವಾದ ಸಾಧಕನ ಬದುಕು. ಜನಕ ಎಲ್ಲಾ ಅಧಿಕಾರದ ಭೋಗದ ನಡುವೆ ಇದ್ದು, ವಿರಕ್ತನಾಗಿ ಬದುಕಿದವ. ಆದ್ದರಿಂದ ಕೃಷ್ಣ ಇಲ್ಲಿ ಜನಕನ ಹೆಸರನ್ನು ಪ್ರಸ್ತಾಪಿಸುತ್ತಾನೆ. ಕೃಷ್ಣ ಹೇಳುತ್ತಾನೆ: “ಜನಕ ಮುಂತಾದ ರಾಜರ್ಷಿಗಳು ಕರ್ಮಯೋಗದಿಂದಲೇ ಜ್ಞಾನ ಪಡೆದು, ಕರ್ಮ ಮಾಡುತ್ತಾ ಎತ್ತರಕ್ಕೇರಿದರೇ ಹೊರತು, ಕರ್ಮ ತ್ಯಾಗದಿಂದಲ್ಲ” ಎಂದು. ಈ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾದ ನೀನು ಸಮಾಜಕ್ಕೋಸ್ಕರ ಯುದ್ಧ ಮಾಡು ಎಂದು ಹೇಳುತ್ತಿದ್ದಾನೆ ಕೃಷ್ಣ”.
ಕರ್ತವ್ಯ ಕರ್ಮದ ಬಗ್ಗೆ ವಿವರವಾಗಿ ವಿವರಿಸಿದ ಕೃಷ್ಣ, ಈಗ ತಪ್ಪು ದಾರಿಯಲ್ಲಿ ಮುಂದಾಳು ನಡೆದಾಗ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ಸ್ವತಃ ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಮುಂದಿನ ಶ್ಲೋಕಗಳಲ್ಲಿ ವಿವರಿಸುತ್ತಾನೆ.