ಶ್ಲೋಕ – 02
ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೨॥
ವ್ಯಾಮಿಶ್ರೇಣ ಇವ ವಾಕ್ಯೇನ ಬುದ್ಧಿಮ್ ಮೋಹಯಸಿ ಇವ ಮೇ ತತ್ ಏಕಮ್ ವದ ನಿಶ್ಚಿತ್ಯ ಯೇನ ಶ್ರೇಯಃ ಅಹಮ್ ಅಪ್ನುಯಾಮ್-ಇಬ್ಬಗೆಯ ಮಾತಿನಿಂದ ನನ್ನ ನಿರ್ಧಾರಶಕ್ತಿಯನ್ನು ಗೊಂದಲಕ್ಕೀಡುಮಾಡುವಂತಿದೆ. ಆದ್ದರಿಂದ, ಒಂದನ್ನು ನಿರ್ಧರಿಸಿ ಹೇಳು: ಯಾವುದರಿಂದ ನಾನು ಒಳಿತನ್ನು ಪಡೆದೇನು?
ಇಲ್ಲಿ ‘ವ್ಯಾಮಿಶ್ರೇಣ’ ಎಂದರೆ ಸಂದಿಗ್ದಾರ್ಥ (Contradicting, Confusing). “ಈ ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.