ಶೇಣಿ ಗೋಪಾಲಕೃಷ್ಣ ಭಟ್

ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗಕರ್ತೃ, ಮೇಳದಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮರಾಗಿದ್ದ ಗೋಪಾಲಕೃಷ್ಣ ಭಟ್ಟರು  ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ ಏಪ್ರಿಲ್ 7, 1918ರಲ್ಲಿ ಜನಿಸಿದರು.  ತಂದೆ ನಾರಾಯಣಭಟ್ಟರು, ತಾಯಿ ಲಕ್ಷ್ಮೀಅಮ್ಮನವರು. ಗೋಪಾಲಕೃಷ್ಣ ಭಟ್ಟರು  ಮೂರು ವರ್ಷ ತುಂಬುವ ಮುನ್ನವೇ ಪಿತೃವಾತ್ಸಲ್ಯದಿಂದ ವಂಚಿತರಾದರು. ತಾಯಿ, ಅಜ್ಜಿಯ ಆಸರೆಯಲ್ಲಿ ಬದುಕು ನಡೆಯಿತು. ತಾಯಿ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಭಾಗವತ ಗ್ರಂಥಗಳ ಸುಶ್ರಾವ್ಯ ಹಾಡುಗಾರ್ತಿ.

ಭಟ್ಟರು ಬೇಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿದ್ದಾಗಲೇ ‘ಶ್ರೀ ಸುಬ್ರಹ್ಮಣ್ಯ ಕೃಪಾ ಪೋಷಿತ ನಾಟಕ’ ಮಂಡಲಿಯ ಬಾಲನಟನಾಗಿ ರಂಗಪ್ರವೇಶ ಮಾಡಿದರು. ಭಕ್ತಿ ಸಾಮ್ರಾಜ್ಯ, ಸದಾರಮೆ, ಹರಿಶ್ಚಂದ್ರ, ಮೃಚ್ಛಕಟಿಕ, ಗಿರಿಜಾಕಲ್ಯಾಣ, ಪ್ರಹ್ಲಾದ ಚರಿತ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿವಂತರಾದರು.

ಶೇಣಿ ಗೋಪಾಲಭಟ್ಟರು ಮುಂದೆ ಓದಿದ್ದು ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ.  ಕವಿ ವೆಂಕಪ್ಪ ಶೆಟ್ಟಿ, ಮಾಸ್ತರ್‌ ವಿಷ್ಣುಭಟ್ಟರ ಅರ್ಥಗಾರಿಕೆಗೆ ಮಾರುಹೋದ ಭಟ್ಟರು ಅದೇ ದಾರಿಯಲ್ಲಿ ನಡೆದು ಅರ್ಥಧಾರಿಯಾಗಿ ಪ್ರಸಿದ್ಧಿ ಪಡೆದರು. ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ ಯಕ್ಷಗಾನ ಜೋಡಿಯಾಟ ಮಾಡಿದ್ದು ಈ ಈರ್ವರಿಗೂ ಅಪಾರ ಕೀರ್ತಿಯನ್ನು ತಂದಿತು.  ಶೇಣಿ-ಸಾಮಗರ ರಾವಣಕಥೆ, ವಾಲಿವಧೆ ಪ್ರಸಂಗಗಳು ಅತ್ಯಂತ ಜನಪ್ರಿಯವೆನಿಸಿದ್ದವು.

ಭಟ್ಟರಿಗೆ ಯಕ್ಷಗಾನದಲ್ಲಿ  ಮದ್ದಲೆ ನುಡಿಸುವುದು ಮತ್ತು ಹಾಡುಗಾರಿಕೆಯ ಜೊತೆಗೆ  ಸಾಹಿತ್ಯದ ಒಲವು ಕೂಡಾ ಬೆಳೆದುಬಂತು.   ಮೇಘನಾದ, ಗೃಹಿಣಿ, ರಾಮಾಂಜನೇಯ, ಮಾತೃಭಕ್ತಿ ಮುಂತಾದವು ಶೇಣಿ ಗೋಪಾಲ ಭಟ್ಟರು ರಚಿಸಿದ ಯಕ್ಷಗಾನ ಪ್ರಸಂಗಗಳು.  ಈ ನಿಟ್ಟಿನಲ್ಲಿ ಅವರು ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗಾಗಿ ಮಾಡಿದ ಕಾಯಕ ಅಪಾರವಾದುದು.  ಭಟ್ಟರು  ‘ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕಸಭಾ’ ಅಲ್ಲದೆ ಸುರತ್ಕಲ್, ಕುಂಡಾವು, ಕೊಡ್ಲು, ಧರ್ಮಸ್ಥಳ ಮುಂತಾದ ಮೇಳಗಳಲ್ಲೂ ಅಭಿನಯಿಸಿದ್ದರು. ತುಳುನಾಡಸಿರಿ. ತಿರುಪತಿ ಮಹಾತ್ಯ್ಮ, ಚಂದ್ರಾವಳಿ ವಿಲಾಸ, ಕಡುಗಲಿ ಕುಮಾರರಾಮ, ಮಂತ್ರಾಲಯ ಮಹಾತ್ಮ್ಯ, ರಾಜಾಯಯಾತಿ, ಬಪ್ಪ ಬ್ಯಾರಿ, ಭೀಷ್ಮ, ವಾಲಿ, ಕಂಸ, ರಾವಣ, ಮಗಧ  ಮುಂತಾದವವು  ಇವರನ್ನು ನಟನೆಯಲ್ಲಿ ಉತ್ತುಂಗಕ್ಕೇರಿಸಿದ ಪಾತ್ರಗಳು.

ಶೇಣಿ ಗೋಪಾಲಕೃಷ್ಣ ಭಟ್ಟರಿಗೆ  ಸಂದ ಪ್ರಶಸ್ತಿಗೌರವಗಳು ಹಲವಾರು. ಕರ್ನಾಟಕ, ಕೇರಳ, ಎರಡು ರಾಜ್ಯಗಳಿಂದಲೂ ರಾಜ್ಯಪ್ರಶಸ್ತಿ ಗಳಿಸಿದ ಯಕ್ಷಗಾನ ಕಲಾವಿದರೆಂಬ ಹೆಗ್ಗಳಿಕೆಯ ಜೊತೆಗೆ ಕ್ಯಾಸೆಟ್ ಲೋಕದಲ್ಲಿ ಅವರ ಅನೇಕ ಕ್ಯಾಸೆಟ್ಟುಗಳು  ದಾಖಲೆಯ ಮಾರಾಟವಾದವು.   ಮಂಗಳೂರು ವಿಶ್ವವಿದ್ಯಾಲಯವು ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಡಾಕ್ಟರೇಟ್ ಗೌರವವನ್ನಿತ್ತು ಗೌರವಿಸಿತು.  ಸಾಮಗ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ಗೌರವ.  ಯಕ್ಷಗಾನ ಮತ್ತು ತಾಳ ಮದ್ದಲೆಗಳಲ್ಲಿ ಅವರ 500ಕ್ಕೂ ಹೆಚ್ಚು ಧ್ವನಿಮುದ್ರಿಕೆಗಳು ಬೆಳಕು ಕಂಡು ಜನಪ್ರಿಯಗೊಂಡಿವೆ.

ಈ ಮಹಾನ್ ಕಲಾವಿದರು ಜುಲೈ 2006ರಲ್ಲಿ ಈ ಲೋಕವನ್ನಗಲಿದರು.  ಯಕ್ಷಗಾನ ಜಗತ್ತಿನಲ್ಲಿ ಅವರು ಉಳಿಸಿಹೋದ ಹೆಜ್ಜೆಗಳು ಅಳಿಸಲಾರದಂತಹವು.

ಮಾಹಿತಿ ಕೃಪೆ:  ಕಣಜ ಮತ್ತು managalorean.com

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *