ವಿಜಯ ಸಾಸನೂರ (೧೪.೪.೧೯೪೮ – ೦೧.೦೩.೨೦೦೧): ರೋಚಕ ಕಾದಂಬರಿಗಳನ್ನೂ ಧಾರಾವಾಹಿಯಾಗಿ ಪತ್ರಿಕೆಗಳಲ್ಲಿ ಪ್ರಕಟಿಸಿ ಕನ್ನಡ ಓದುಗರನ್ನು ಬೆಳೆಸುವುದರಲ್ಲಿ ಪ್ರಮುಖರಾಗಿದ್ದ ವಿಜಯಸಾಸನೂರರು ಹುಟ್ಟಿದ್ದು ವಿಜಾಪುರದಲ್ಲಿ ೧೯೪೮ ರ ಏಪ್ರಿಲ್ ೧೪ ರಂದು. ತಂದೆ ಬಿ.ಟಿ. ಸಾಸನೂರ, ಕನ್ನಡ ಖ್ಯಾತ ಪ್ರಾಧ್ಯಾಪಕರು, ಪ್ರಿನ್ಸಿಪಾಲರು, ಹಾಗೂ ಲೋಕಸೇವಾ ಆಯೋಗದ ಸದಸ್ಯರು ಆಗಿದ್ದರು. ತಾಯಿ ಸುಮಿತ್ರಾಬಾಯಿಯವರು ವಿದ್ಯಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರು.
ಪ್ರಾರಂಭಿಕ ಶಿಕ್ಷಣ ವಿಜಾಪುರದಲ್ಲಿ. ಎಸ್.ಎಸ್.ಎಲ್.ಸಿ. ಯಲ್ಲಿ ೪ ನೆಯ ರ್ಯಾಂಕ್ ಪಡೆದ ವಿದ್ಯಾರ್ಥಿ. ಬೀದರ್ನ ಭೂಮರೆಡ್ಡಿ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ (೪ ನೇ ರ್ಯಾಂಕ್). ಮುಂಬಯಿ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಗಾಗಿ ಓದುತ್ತಿರುವಾಗಲೇ ಕೇಂದ್ರಲೋಕ ಸೇವಾ ಆಯೋಗದ (ಐ.ಪಿ.ಎಸ್) ಪರೀಕ್ಷೆಗೆ ಕುಳಿತು ಆರನೆಯ ರ್ಯಾಂಕ್ ಪಡೆದು ಐಪಿಎಸ್ಗೆ ಸೇರಿದರು. ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ (೨೨ ವರ್ಷ) ಐ.ಪಿ.ಎಸ್. ಪಾಸಾದ, ಕನ್ನಡದಲ್ಲಿ ಐ.ಪಿ.ಎಸ್ ಪರೀಕ್ಷೆಗೆ ಬರೆದ ಹೆಗ್ಗಳಿಕೆ.
ಐ.ಪಿ.ಎಸ್. ಅಧಿಕಾರಿಯಾಗಿ ೧೯೭೦ ರಲ್ಲಿ ಸೇವೆಗೆ ಪ್ರವೇಶಿಸಿ ಬೆಂಗಳೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಎಸ್.ಪಿ.ಯಾಗಿ, ಕೇಂದ್ರವಲಯ ಹಾಗೂ ಆಹಾರಘಟಕಗಳ ಡಿ.ಐ.ಜಿ.ಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡಮಿಯ ನಿರ್ದೇಶಕರಾಗಿ ಹಾಗೂ ಸಾರ್ವಜನಿಕ ದೂರು ವಿಭಾಗದ ಐ.ಜಿ.ಪಿ.ಯಾಗಿ ಪಡೆದ ಕಾರ್ಯಾನುಭವ. ದೆಹಲಿಯ ಇಂಟಲಿಜೆನ್ಸ್ ಬ್ಯೂರೋದ ಸಹಾಯಕ ನಿರ್ದೇಶಕರಾಗಿಯೂ ಕೆಲಕಾಲ.
ಇವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಾಗಿ, ಕನ್ನಡ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಮುಂಬೈ ಸೆನ್ಸಾರ್ ಬೋರ್ಡ್ನ ಪ್ರಾದೇಶಿಕ ಅಧಿಕಾರಿಯಾಗಿ, ಮಕ್ಕಳ ಚಲನಚಿತ್ರ ಸಂಸ್ಥೆಯ ಮುಖ್ಯಾಧಿಕಾರಿಯಾಗಿಯೂ ಸಲ್ಲಿಸಿದ ಸೇವೆ.
ಸಾಹಿತ್ಯ ಪ್ರೇರಣೆ ದೊರೆತದ್ದೂ ಇವರ ತಂದೆಯಿಂದಲೇ. ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ತಂದೆ, ಮಗನಿಗೆ ಭಗವದ್ಗೀತೆಯ ಎಲ್ಲ ಶ್ಲೋಕಗಳನ್ನೂ ಕಂಠಪಾಠ ಮಾಡಿಸಿದ್ದರಂತೆ. ಗ್ರಂಥಾಲಯಗಳಿಗೆ ತಂದೆಯೊಡನೆ ಹೋಗಿ ಉತ್ತಮ ಗ್ರಂಥಗಳನ್ನೋದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಮನೆಯಲ್ಲಿಯೂ ಸಂಗ್ರಹಿಸಿದ್ದ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಉತ್ತಮ ಗ್ರಂಥಗಳನ್ನೋದುವಂತೆ ಪ್ರೇರೇಪಿಸುತ್ತಿದ್ದರು.
ಬಿ.ಎಸ್ಸಿ. ಓದುತ್ತಿದ್ದಾಗಲೇ ಇವರು ಪ್ರಕಟಿಸಿದ ಮೊದಲ ಕಥಾ ಸಂಕಲನ ‘ಅಪರಾಜಿತೆ’. ಬೆಟಗೇರಿ ಕೃಷ್ಣಶರ್ಮರು ಮುನ್ನುಡಿ ಬರೆದು ಹಾರೈಸಿದ್ದರೆ ಎಂ.ಎಸ್ಸಿ ಓದುವಾಗ ಹೊರತಂದ ಸಂಕಲನ ‘ಉಡುಗೊರೆ’. ಈ ಸಂಗ್ರಹವನ್ನೂ ಸಿಂಪಿ ಲಿಂಗಣ್ಣನವರೇ ಪ್ರಕಟಿಸಿದರು. ನಂತರ ಹೊರಬಂದ ಕಥಾ ಸಂಕಲನಗಳು ಕುರಿಗಳು, ಕ್ಷಣಗಳು, ಉತ್ಸವ, ಏಕಾಂಗಿ, ನಾವೇನೋ ಹೇಳುತ್ತಿದ್ದೇವೆ, ಶಾಂತಿಗ್ರಾಮದ ಒಂದು ರಾಜಕೀಯ ಅಧ್ಯಾಯ, ಅರಣ್ಯ ಪರ್ವ ಮುಂತಾದ ಸಂಕಲನಗಳು.
ಇವುಗಳಲ್ಲಿ ಅಪರಾಜಿತೆ, ಕುರಿಗಳು, ಉಡುಗೊರೆ, ಕ್ಷಣಗಳು ಮತ್ತು ಉತ್ಸವ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ತರಗತಿಗಳಿಗೆ ಪಠ್ಯ ಪುಸ್ತಕವಾಗಿದ್ದವು.
೧೯೬೫ ರಲ್ಲಿಯೇ ಸಣ್ಣ ಕಥೆಗಳನ್ನೂ ಬರೆಯಲು ಪ್ರಾರಂಭಿಸಿದ ಸಾಸನೂರರು ಬರೆದ ಕಥೆಗಳು ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟಿತ. ಇವರು ಮೆಚ್ಚಿಮದುವೆಯಾದ ವಿದ್ಯುಲ್ಲತಾ ರವರೆ, ಸಣ್ಣ ಕಥೆ ಬರೆಯಲು ಕಾರಣ. ಅವರನ್ನು ಮೆಚ್ಚಿಸಲೆಂದೇ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರಂತೆ. ವಿದ್ಯುಲ್ಲತಾ ರವರು ಓದುತ್ತಿದ್ದುದು ಸಂಯುಕ್ತ ಕರ್ನಾಟಕ ಪತ್ರಿಕೆ.
ಸುಧಾ ವಾರ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಎಂ.ಬಿ.ಸಿಂಗ್ರವರು ಕನ್ನಡ ಓದನ್ನು ವ್ಯಾಪಕಗೊಳಿಸಲು ಸಾಹಸಪ್ರಧಾನ ಕಾದಂಬರಿಗಳನ್ನೂ ಬರೆಯಲು ಪ್ರೇರೇಪಿಸಿದಾಗ ಬರೆದ ಚೊಚ್ಚಲ ಕಾದಂಬರಿ ‘ವಿಗ್ರಹ ಚೋರರು’. ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು.
ನಂತರ ಪ್ರಕಟಗೊಂಡ ಕಾದಂಬರಿಗಳು ಅಜಿತ್, ಸಾಮ್ರಾಟ್, ಗೀತಸಂಗೀತ, ಯುದ್ಧ, ಮಾಯಾ, ಜ್ವಾಲಾಮುಖಿ, ಅಪರಂಜಿ ಮುಂತಾದ ಕಾದಂಬರಿಗಳು ಲಕ್ಷಾಂತರ ಓದುಗರಿಗೆ ತಲುಪಿ ಮೆಚ್ಚುಗೆ ಗಳಿಸಿತು. ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಾದಂಬರಿಗಳು ಶಿವತಾಂಡವ, ಇಂದ್ರಜಾಲ ಮತ್ತು ನಿರಂಜನ.
೧೯೭೫ರಲ್ಲಿ ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಗೆ ಪ್ರಾಂಶುಪಾಲರಾಗಿದ್ದಾಗ ದೇಶದ ಮಂದಿಯ ವಿಚಿತ್ರ ನಡವಳಿಕೆಗಳನ್ನು ಟೀಕಿಸಿ ಬರೆದ ಲೇಖನಗಳ ಸಂಗ್ರಹ ‘ಹುಚ್ಚರ ಸಂತ್ಯಾಗ ಒಂದ್ನಾಕ್ದಿನ’ ಪ್ರಕಟಗೊಂಡನಂತರ ನಾಟಕಕಾರ, ನಟ ಅಶೋಕ ಬಾದರದಿನ್ನಿಯವರು ಇದನ್ನೂ ನಾಟಕವಾಗಿಸಿದರು.
ಕನ್ನಡಿಗರಿಗೆ ಅಪರಿಚಿತವಾಗಿದ್ದ ಕ್ಷೇತ್ರವನ್ನೂ ಪರಿಚಯಿಸುವುದಕ್ಕೋಸ್ಕರವೇ ಕಾದಂಬರಿ ಕ್ಷೇತ್ರವನ್ನಾಯ್ದುಕೊಂಡು ಬರೆದು ಹೊಸ ಆಯಾಮವನ್ನೇ ಸೃಷ್ಟಿಸಿದರು. ಸಾಹಿತ್ಯ ಕ್ಷೇತ್ರಕ್ಕಿಂತ ಭಿನ್ನವಾದ ಕಾರ್ಯಕ್ಷೇತ್ರದಿಂದ ಪಡೆದ ಅನುಭವಗಳಿಗೆ ನೈಜ ಚಿತ್ರಣದ ಒತ್ತುಕೊಟ್ಟು ಓದುಗರಲ್ಲಿ ರೋಮಾಂಚನವನ್ನುಂಟು ಮಾಡುವುದರಲ್ಲಿ ಯಶಸ್ವಿಯಾದರು.
ವಾಸ್ತವ ನೆಲೆಗಟ್ಟಿನ ಮೇಲೆಯೇ ಕಾದಂಬರಿಗಳನ್ನು ರಚಿಸಿರುವ ಸಾಸನೂರರು ಹೆಚ್ಚು ಒತ್ತುಕೊಟ್ಟು ಬರೆದದ್ದು ಗೂಂಡಾಗಿರಿ, ಗ್ಯಾಂಗ್ವಾರ್, ಭಯೋತ್ಪಾದಕತೆಯ ವಿರುದ್ಧ ಪೊಲೀಸರು ನಡೆಸಿದ ಹೋರಾಟ, ಕೇಂದ್ರಗೂಢಚಾರ ಪಡೆಗಳ ಕಾರ್ಯಾಚರಣೆಯ ಬಗ್ಗೆಯೇ.
೧೯೮೯ ರಲ್ಲಿ ಇವರು ಬರೆದ ‘ಸ್ವಸ್ತಿಕ’ ಕಾದಂಬರಿಯಲ್ಲಿ ದೇಶದ ಪ್ರಧಾನಿಯನ್ನೂ ಹತ್ಯೆಮಾಡುವ ಷಡ್ಯಂತ್ರವನ್ನು ಪಾತಕಿಗಳು ರೂಪಿಸುತ್ತಾರೆ. ಆದರೆ ರಕ್ಷಣಾ ಪಡೆಗಳು ಷಡ್ಯಂತ್ರವನ್ನು ಭೇದಿಸಿ ಪ್ರಧಾನಿ’ಯ ಪ್ರಾಣ ಉಳಿಸುವಲ್ಲಿ ಸಫಲರಾಗುತ್ತಾರೆ. ಆದರೂ ಭಯೋತ್ಪಾದಕತೆಯ ಹಾಗೂ ವಿಚ್ಛಿದ್ರ ಕಾರಕ ಶಕ್ತಿಗಳ ವಿರುದ್ಧ ಜನಜಾಗೃತಿಗೊಳಿಸಲು ಹಲವಾರು ಕಾದಂಬರಿಗಳ ಮೂಲಕ ಪ್ರಯತ್ನಿಸಿದ್ದಾರೆ. ಈ ದಿಸೆಯಲ್ಲಿ ಬರೆದ ಕಾದಂಬರಿಗಳು ‘ಶಿವತಾಂಡವ’ ಹಾಗೂ ‘ಉಸಿರು’ ಕಾದಂಬರಿಗಳು. ಇವರ ಐದು ಕಾದಚಂಬರಿಗಳು ಹಾಗೂ ಒಂದು ಕಥೆ ಬೆಳ್ಳಿ ಪರದೆಯನ್ನಲಂಕರಿಸಿದೆ. (ಧ್ರುವತಾರೆ, ಜ್ವಾಲಾಮುಖಿ, ಶಬ್ದವೇಧಿ, ಸವ್ಯಸಾಚಿ, ವಿಗ್ರಹಚೋರರು ಮುಂತಾದವು) ಧ್ರುವತಾರೆ ಕನ್ನಡ ಚಲನ ಚಿತ್ರ ಇವರಿಗೆ ೧೯೮೫-೮೬ ಸಾಲಿನ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಮೂರು ಸಾಕ್ಷ್ಯ ಚಿತ್ರಗಳಿಗೆ ನಿರ್ದೇಶಕರಾಗಿದ್ದಲ್ಲದೆ ಹದಿನೆಂಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದರು. ಸಾಹಿತಿಯಾಗಿದ್ದಷ್ಟೇ ಅಲ್ಲದೆ ಹಿನ್ನೆಲೆ ಗಾಯಕರಾಗಿಯೂ ‘ಸಂಗೀತ’ ಚಿತ್ರಕ್ಕಾಗಿ ಹಾಡಿದ್ದಾರೆ. ದೂರದರ್ಶನದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ. ಒಂದು ಧ್ವನಿ ಸುರಳಿ ‘ಹಾಡೆನ್ನ ಕೋಗಿಲೆ’ ಯು ಹೊರಬಂದಿದೆ. ಒಟ್ಟು ೨೬ ಕಾದಂಬರಿಗಳು, ಹತ್ತು ಕಥಾ ಸಂಕಲನಗಳು ಪ್ರಕಟವಾಗಿವೆ.
ಗೂಂಡಾಗಿರಿ, ಗ್ಯಾಂಗ್ವಾರ್, ಮಾರಾಮಾರಿಯ ದುರಳ ಮನಸ್ಸಿನಾಳಕ್ಕೆ ಇಳಿದು ನೋಡುವ ಪೊಲೀಸ್ ಕಾರ್ಯಾಚರಣೆಯ ಸಾಹಸ ಕಾದಂಬರಿಗಳ ಕರ್ತೃವನ್ನೂ ಹುಡುಕಿಕೊಂಡುಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿಯು ೧೯೯೭ ರಲ್ಲಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಶಿವಮೊಗ್ಗ ಸಾಹಿತ್ಯ ಸಮ್ಮೇಳನ (೧೯೭೬) ದಲ್ಲಿ ‘ಆಡಳಿತದಲ್ಲಿ ಕನ್ನಡ’ ಗೋಷ್ಠಿಯಲ್ಲಿ ಪ್ರಬಂಧಮಂಡನೆ, ಕಲಬುರ್ಗಿಯ ಸಾಹಿತ್ಯ ಸಮ್ಮೇಳನ (೧೯೮೭) ದಲ್ಲಿ ಸಾಹಿತ್ಯ ಗೋಷ್ಠಿಯ ಉದ್ಘಾಟನೆ, ಮುಧೋಳ ಸಾಹಿತ್ಯ ಸಮ್ಮೇಳನದ (೧೯೯೫) ಶಿಕ್ಷಣ ಮತ್ತು ಸಮುದಾಯ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಗೌರವಗಳು.
೧೯೯೧ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ ರಲ್ಲಿ ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕವೂ ಸಂದಿದೆ. ಇವರು ತೀರಿಕೊಳ್ಳುವ ಒಂದು ತಿಂಗಳು ಮುಂಚೆಯಷ್ಟೇ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿತ್ತು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಲ್ಲಿದ್ದ ಸಾಸನೂರರನ್ನು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ, ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ತೀರಿಕೊಂಡದ್ದು ೨೦೦೧ ರ ಮಾರ್ಚ್ ೧ ರಂದು.
ಪತ್ನಿ ವಿದ್ಯುಲ್ಲತಾರವರು ಕೂಡಾ ಕಾದಂಬರಿಗಾರ್ತಿ. ಅವರು ಬರೆದ ಕಾದಂಬರಿಗಳಲ್ಲಿ ರಥಸಪ್ತಮಿ ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ಮೈಸೂರು ಮತ್ತು ತಂಜಾವೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೂ ಪರಿಣತರು. ಪತಿ-ಪತ್ನಿಯರಿಬ್ಬರೂ ಜೋಡಿಯಾಗಿ ಬರೆದ ‘ಅಷ್ಟಪಾದ’ ಕಾದಂಬರಿಯು ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.