ವಿಜಯ ದಶಮಿ – ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. ‘ದಶಹರ’ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.
ಪ್ರಾಮುಖ್ಯತೆ
ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯ ದಶಮಿ ಎಂದು ಹೆಸರು ಬಂದಿತಂತೆ.
ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||
ಈ ವಿಜಯ ದಶಮಿ ದಿನದ೦ದೇ, ‘ದ್ವೈತ ವೇದಾ೦ತ’ ಅಥವ ‘ತತ್ವ ಸಿದ್ಧಾ೦ತ’ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ “ಪಾಜಕ” ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.
ವಿಜಯದ ಶಮೀ
ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು. ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.
wikipedia
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.