ಮಂಡ್ಯ ರಮೇಶ್ (ಜುಲೈ ೧೪, ೧೯೬೪) ರಂಗಭೂಮಿ ತಜ್ಞರಾಗಿ, ನಟರಾಗಿ, ನಿರ್ದೇಶಕರಾಗಿ, ಪ್ರಖ್ಯಾತ ‘ನಟನ’ ತಂಡದ ಸಂಸ್ಥಾಪಕರಾಗಿ, ಚಲನಚಿತ್ರ ರಂಗದಲ್ಲಿ ನೂರಾರು ಚಿತ್ರಗಳ ಯಶಸ್ವೀ ಕಲಾವಿದರಾಗಿ ಹೀಗೆ ಮಹತ್ವದ ಸಾಧನೆಗಳ ಕ್ರಿಯಾಶೀಲ ಕಲಾವಿದರು.
ಜೀವನ: ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಜುಲೈ ೧೪, ೧೯೬೪ರಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜನಿಸಿದರು. ತಂದೆ ಎನ್. ಸುಬ್ರಹ್ಮಣ್ಯ, ತಾಯಿ ನಾಗಲಕ್ಷ್ಮೀ. ಓದಿದ್ದು ಬಿ.ಎಸ್ಸಿ ಪದವಿ.
ರಂಗಭೂಮಿಯಲ್ಲಿ
ರಮೇಶ್ ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. ನಿನಾಸಂ ನಾಟಕಶಾಲೆಯಲ್ಲಿ ಪದವಿ ಪಡೆದರು, ರಂಗಾಯಣದ ಕಲಾವಿದರಾಗಿ ಪಡೆದ ಶ್ರೀಮಂತ ಅನುಭವ ಅವರನ್ನು ಪಕ್ವರನ್ನಾಗಿಸಿತು. ಮಂಕ, ಮಂಡ್ಯದ ಗೆಳೆಯರ ಬಳಗ, ಮಾಂಡವ್ಯ ಕಲಾ ಸಂಘ, ವೇದಿಕೆ ಮುಂತಾದ ಹಲವಾರು ಸಂಘ ಸಂಸ್ಥೆಗಳೊಡನಾಟ, ಮೈಸೂರಿನ ನಟನ ನಾಟಕಶಾಲೆ, ಸಂಸ್ಥಾಪಕ, ಮುಖ್ಯಸ್ಥರಾಗಿ ಹೊತ್ತ ಜವಾಬ್ದಾರಿ. ದೇಸಿ ಶೈಲಿಯ ‘ನಟನರಂಗ ಮಂಟಪದ’ ರೂವಾರಿ ಇವೆಲ್ಲಾ ಮಂಡ್ಯ ರಮೇಶ್ ಅವರ ಅಪಾರ ಸಾಧನೆಗಳಲ್ಲಿನ ಕೆಲವೊಂದು ತುಣುಕುಗಳು.
“ಮಂಡ್ಯ ಅಂದ್ರೆ ಇಂಡಿಯಾ..!” “ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ” ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ “ಇಂಡಿಯಾ” ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ “ಮಂಡ್ಯ ರಮೇಶ್.”
ತನ್ನೆದುರು ಸಿಕ್ಕ ಎಳಯರನ್ನು “ಕಂದಮ್ಮಾ..” ಎಂದೂ, ಹಿರಿಯರು ಮತ್ತು ಸಮವಯಸ್ಕರನ್ನು “ಗುರುಗಳೇ..” ಎನ್ನುತ್ತಾ, ಎಂದಿಗೂ ಮಾಸದ ಮಂದಹಾಸ, ಸ್ನೇಹಭಾವದೊಂದಿಗೆ ಮೋಡಿ ಮಾಡುವ ಮಂಡ್ಯ ರಮೇಶ್ ಓರ್ವ ಅದ್ಭುತ ಕಲಾವಿದ, ನಿರ್ದೇಶಕ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಸಿನಿಮಾ, ಕಿರುತರೆಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರೂ, ಕಲಾಪ್ರಪಂಚದಲ್ಲಿ ತನಗೊಂದು ಸ್ಥಾನ-ಮಾನ ದೊರಕಿಸಿಕೊಟ್ಟ ರಂಗಭೂಮಿಯನ್ನು ಬದುಕಿನ ಉಸಿರೆಂದು ಭಾವಿಸಿರುವ ಆದರ್ಶವಂತ.
ನಟನ: ಅಂದ ಹಾಗೆ ಈ ಹೃದಯವಂತ ಕನಸುಗಾರನ ಕಲ್ಪನೆಯ ಕೂಸೇ “ನಟನ.” ರಂಗಪ್ರಪಂಚದಲ್ಲಿ ತನ್ನನ್ನು ಕೈಹಿಡಿದು ಮುನ್ನಡೆಸಿದ ಭಾರತೀಯ ರಂಗಭೂಮಿಯ ಧ್ರುವವತಾರೆಗಳಾದ ನಿನಾಸಂನ ಕೆ.ವಿ.ಸುಬ್ಬಣ್ಣ, ರಂಗಭೀಷ್ಮ ಬಿ.ವಿ.ಕಾರಂತರ ಹಾದಿಯಲ್ಲೇ ಸಾಗುತ್ತಾ ಕಟ್ಟಿದ ರಂಗನೆಲೆ “ನಟನ”. ಇದು ಇದೀಗ ಒಂದು ಹೆಮ್ಮೆರವಾಗಿ ಬೆಳೆದಿದೆ. ರಂಗಶಿಕ್ಷಣ, ಲಲಿತಕಲೆಗಳ ಕೇಂದ್ರವಾಗಿರುವ “ನಟನ” ತನ್ನ ನಿರಂತರ ಚಲನಶೀಲತೆಯಿಂದಾಗಿ ನಾಡಿನ ರಂಗಚಳುವಳಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಗಳಿಸಿದ್ದು, ಅದ್ಭುತ ಶಕ್ತಿಯ ಹೊಸ ಕಲಾವಿದರನ್ನು ತಯಾರಿಸುವ ರಂಗ ಶಾಲೆಯಾಗಿ ರೂಪುಗೊಂಡಿದೆ.
ರಜಾ ಮಜಾ: ಮಕ್ಕಳಿಗೆ ಎಳವೆಯಲ್ಲೇ ರಂಗದೀಕ್ಷೆ ನೀಡುವ ಉದ್ದೇಶದಿಂದ ಕಲಿಯುತ್ತಲೇ ನಲಿಯುವ -ನಲಿಯುತ್ತಲೇ ಕಲಿಯುವ ವಿಶಿಷ್ಠ ಪರಂಪರೆಯೊಂದನ್ನು ಹುಟ್ಟು ಹಾಕುತ್ತಿರುವ ಬೇಸಿಗೆ ಶಿಬಿರ “ರಜಾ-ಮಜಾ”- “ನಟನ”ದ ಒಂದು ಟಿಸಿಲು. ಬಾಲ್ಯ ಸಹಜ ಆಟೋಟಗಳು, ತುಂಟಾಟಗಳಿಂದ ವಂಚಿತರಾಗಿರುವ ಭವಿಷ್ಯದ ಪ್ರಜೆಗಳಿಗೆ ಬೇಸಿಗೆ ರಜೆಯನ್ನು ಮಜವಾಗಿ ಸ್ಮರಣೀಯವಾಗಿ ಕಳೆಯುವುದರೊಂದಿಗೆ, ಹಾಡು, ನರ್ತನ, ಅಭಿನಯ, ಕರಕುಶಲ ಕಲೆಗಾರಿಕೆಗಳ ಕಲಿಕೆಯೊಂದಿಗೆ ಸಾಧಕರೊಂದಿಗೆ ಸಂವಾದ ನಡೆಸುವ ಮೂಲಕ ಬದುಕಿನ ಮೂಲಪಾಠಗಳನ್ನೂ ತಿಂಗಳೊಪ್ಪತ್ತಿನಲ್ಲಿ ಕಲಿಸುವ “ರಜಾ-ಮಜಾ” ಮಂಡ್ಯ ರಮೇಶ್ ಅವರ ಕನಸಿನ ಕೂಸು.
ಆರಂಭವಾದ ಕೆಲವೇ ವರ್ಷಗಳಲ್ಲಿಯೇ ಮೈಸೂರಿನ ಹಲವು ಬಡಾವಣೆಗಳಲ್ಲಷ್ಟೇ ಅಲ್ಲದೇ, ನೆರೆಯ ಮಂಡ್ಯ ಜಿಲ್ಲೆಯ ಪಾಂಡವಪುರ, ದೂರದ ಉಡುಪಿ ಜಿಲ್ಲೆಗಳಲ್ಲೂ “ಮಂಡ್ಯ ರಮೇಶ್ ಅವರ ರಜಾ-ಮಜಾ” ಎಂಬ ಬ್ರಾಂಡ್ ನೇಮ್ ಅಡಿಯಲ್ಲಿ ಶಿಬಿರಗಳು ನಡೆಯುತ್ತಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಅಂತೆಯೇ “ರಜಾ-ಮಜಾ” ಹಾಗೂ ನಟನ ರಂಗಶಾಲೆಯ ಮಕ್ಕಳ ಹಾಗೂ ಪೋಷಕರ ಪಾಲಿಗೆ ಮಂಡ್ಯ ರಮೇಶ್ ಕೇವಲ ನಿರ್ದೇಶಕರಲ್ಲ ..ಫ್ರೆಂಡ್..ಫಿಲಾಸಫರ್ ಮತ್ತು ಗೈಡ್…! ನಿಜವಾದ ಅರ್ಥದಲ್ಲಿ ದಿಗ್ಧರ್ಶಕ..!!
ಎಲ್ಲೆಡೆ ಕ್ರಿಯಾಶೀಲ: ರಮೇಶ್ ನಿನಾಸಂ ತಿರುಗಾಟಯೋಜನೆ, ಕೊಡಗಿನ ಪ್ರಾದೇಶಿಕ ರೆಪರ್ಟರಿಯ ಸ್ಥಾಪಕ, ನಿರ್ದೇಶಕರಾಗಿ, ರಾಜ್ಯ, ಹೊರರಾಜ್ಯಗಳಾದ ಭೂಪಾಲ್, ದೆಹಲಿಯ ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ಮಂಡ್ಯದ ರಂಗಚಳುವಳಿಯ ನಟ, ನಿರ್ದೇಶಕ, ಸಂಘಟಕರಾಗಿ ಅನೇಕ ಬಗೆಯ ಕಾರ್ಯನಿರ್ವಹಣೆ ಮಾಡಿದ್ದಾರೆ. ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ್, ಜರ್ಮನಿ, ಆಸ್ಟ್ರಿಯಾಗಳಲ್ಲಿ ನಾಟಕ ಪ್ರದರ್ಶನ ಮಾಡಿ ಬಂದಿದ್ದಾರೆ. ನಾಗಮಂಗಲ ಕನ್ನಡ ಸಂಘ ಮುಂತಾದುವುಗಳಿಗಾಗಿ ಮಣ್ಣಿನ ಗಾಡಿ, ಡಾ. ಸಿದ್ರಾಜು ಸಾಹೇಬರು ಬರುತ್ತಿದ್ದಾರೆ, ಅಗ್ನಿ ಮತ್ತು ಮಳೆ, ಮಾರನಾಯಕ, ಈ ಕೆಳಗಿನವರು ಮುಂತಾದ ನಾಟಕಗಳ ಪ್ರದರ್ಶನ ನೀಡಿದ್ದಾರೆ.
ಚಲನಚಿತ್ರ ರಂಗದಲ್ಲಿ: ಜನುಮದ ಜೋಡಿ ಮೂಲಕ ಚಿತ್ರರಂಗ ಪ್ರವೇಶಿಸಿದ ರಮೇಶ್ ತಾವು ಅಭಿನಯಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಸೆಂಚುರಿ ಹೊಡೆದಿರುವುದಲ್ಲದೇ ಇನ್ನೂ ತಮ್ಮ ಜನಪ್ರಿಯ ಓಟವನ್ನು ಮುಂದುವರೆಸಿದ್ದಾರೆ; ಜನನಿ, ಮನೆತನ, ಫೋಟೋಗ್ರಾಫರ್ ಪರಮೇಶಿ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಪ್ರಶಸ್ತಿ ಗೌರವಗಳು: ತಮ್ಮ ಕಿರಿ ವಯಸ್ಸಿನಲ್ಲೇ ಬಹಳಷ್ಟು ಸಾಧಿಸಿರುವ ಮಂಡ್ಯ ರಮೇಶ್ ಅವರಿಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ.