lord-shiva

ಭೀಮನ ಅಮಾವಾಸ್ಯೆಯ ಆಚರಣೆ ಮತ್ತು ಮಹತ್ವ.

ಮೃತ್ಯುಂಜಯಾಯ ರುದ್ರಾಯ, ನೀಲಕಂಠಾಯ ಶಂಭವೇ, ಅಮೃತೇಶಾಯಾ ಶರ್ವಾಯ, ಮಹಾದೇವಾಯತೇ ನಮಹ:

ಸಾವನ್ನು ಗೆದ್ದವನೇ ರುದ್ರದೇವನೇ ಕೊರಳಲ್ಲಿ ವಿಷ ಧರಿಸಿದವನೇ ದೇವದೇವನೇ ಮಹಾದೇವನೇ ನಿನಗೆ ನನ್ನ ನಮಸ್ಕಾರಗಳು.

ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಜ್ಯೋತಿರ್ಭೀಮೇಶ್ವರನಲ್ಲಿ ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ನಮ್ಮ ನಾಡಿನ ಹೆಣ್ಣುಮಕ್ಕಳು ಬೇಡುವ ವ್ರತವೇ ಜ್ಯೋತಿರ್ಭೀಮೇಶ್ವರ ವ್ರತ.

ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.

ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕೂಡ ಕರೆಯುತ್ತಾರೆ. ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಆಶೀರ್ವಾದ ಪಡೆಯುವುದು ವಾಡಿಕೆ.

ಭೀಮನ ಅಮಾವಾಸ್ಯೆ ಹಿನ್ನೆಲೆ.

ಆಸೆ ಬುರುಕ ಬ್ರಾಹ್ಮಣನೊಬ್ಬ ರಾಜಕುಮಾರನ ಶವದೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿ ಬಿಡುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ ಶವವನ್ನೂ ಹಾಗೂ ವಧುವನ್ನೂ ರಾಜ ಪರಿವರದವರೂ ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ. ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ವಧು, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಜೀವದಾನ ಮಾಡುತ್ತಾರೆ. ಅಮವಾಸ್ಯೆಯ ದಿನ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ಭಿಮೇಶ್ವರ ವ್ರತ ಎಂಬ ಐತಿಹ್ಯವಿದೆ.

ಭೀಮನ ಅಮವಾಸ್ಯೆ ವ್ರತಾಚಾರಣೆಯ ಹಿನ್ನೆಲೆಯ ಬಗ್ಗೆ ಇನ್ನು ಒಂದು ಐತಿಹ್ಯ ಇದೆ. ಕುಂಡಿನಿ ಪಟ್ಟಣದಲ್ಲಿ ಪತಿಭಕ್ತಳೂ, ಶಾಸ್ತ್ರಜ್ಞಳೂ, ನಿರ್ಮಲ ಮನದವಳೂ ಆದ ಚಾರುಮತಿ ಎಂಬ ಸಾಧ್ವಿ ಇರುತ್ತಾಳೆ. ಈ ಬ್ರಾಹ್ಮಣ ಸಾಧ್ವಿಗೆ ಮಹಾಲಕ್ಷ್ಮಿ ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ನಿರ್ದಿಷ್ಟ ಪ್ರಕಾರವಾಗಿ ಪೂಜಿಸಲು ತಿಳಿಸುತ್ತಾಳೆ. ಅದರಂತೆ ಚಾರುಮತಿ ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲ್ಪೋಕ್ತ ಪ್ರಕಾರ ಸಂಧ್ಯಾಕಾಲದಲ್ಲಿ ಅರ್ಚಿಸಿ, ಬಲಗೈಗೆ ದಾರ ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಬ್ರಾಹ್ಮಣರಿಗೆ ನಿವೇದಿಸಿ, ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ವ್ರತವಾಚರಿಸುತ್ತಾಳೆ. ಇದರ ಫಲವಾಗಿ ಅವಳು ಸಕಲ ಸೌಭಾಗ್ಯ ಪಡೆಯುತ್ತಾಳೆ. ಈ ಪ್ರಕಾರವಾಗಿ ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ದೀಪವನ್ನಿಟ್ಟು, ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯ ಮಾಡಿ ಈಶ್ವರನನ್ನು ಆರಾಧಿಸುತ್ತಾರೆ. ಹೊಸಿಲ ಮೇಲೆ ಭಂಡಾರ ಇಟ್ಟು ಸೋದರರಿಂದ ಒಡೆಸುವ ಪದ್ಧತಿಯೂ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಇದೆ.

ಪೂಜಾ ವಿಧಾನ.

ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಆಚರಿಸಬೇಕು. ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು ಜೊತಗೆ ಗಣೇಶ ಅಷ್ಟೋತ್ತರ , ಶಿವ ಅಷ್ಟೋತ್ತರ ಗಳನ್ನು ಹೇಳಿಕೊಂಡು ಪೂಜೆ ಮಾಡಬೇಕು.

ಹೀಗೆ ಪ್ರತಿ ವರ್ಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹೆಣ್ಣು ಮಕ್ಕಳು ಪ್ರತಿ ವರ್ಷ ಭೀಮನ ಅಮಾವಾಸ್ಯೆಯಲ್ಲಿ ವ್ರತಾಚರಣೆ ಮಾಡುತ್ತಾರೆ.

ಜ್ಯೋತಿರ್ಭೀಮೇಶ್ವರ ವ್ರತದ ವಿಧಿ ಮತ್ತು ವ್ರತದ ಕಥೆ.

ಜ್ಯೋತಿರ್ಭೀಮೇಶ್ವರ ವ್ರತ.

ಈ ವ್ರತಕ್ಕೆ ಭೀಮನಮವಾಸ್ಯೆ ವ್ರತ,
ಭೀಮೇಶ್ವರ ವ್ರತ,
ಜ್ಯೋತಿರ್ಭೀಮೇಶ್ವರ ವ್ರತ ಎಂದು ಅನೇಕ ಹೆಸರಗಳಿವೆ.
ಕನ್ಯೆಯರು ತಮಗೆ ಉತ್ತಮವಾದ ಸಕಲಗುಣಸಂಪನ್ನನಾದ ಧೀರ್ಘಾಯುಸ್ಸಿರುವ ಯೋಗ್ಯ ಪತಿ,
ಸುಖೀ ದಾಂಪತ್ಯ ಪ್ರಾಪ್ತಿಗೆ,
ಸುಮಂಗಲಿಯರು ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ,ಪತಿಗೆ ದೀರ್ಘಾಯುಸ್ಸು,ಸುಖ,
ಸಂಪತ್ಸಮೃದ್ಧಿ ವೃದ್ಧಿಸುತ್ತಿರಲಿ ಎಂದು ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನಾಚರಿಸುತ್ತಾರೆ.

ಪತಿವ್ರತೆ ಸಾವಿತ್ರಿಯು ಈ ವ್ರತವನ್ನಾಚರಿಸಿ ನಿಧನನಾಗಿದ್ದ ಪತಿ ಸತ್ಯವಾನನನ್ನು ಶಿವನ ಕೃಪೆಯಿಂದ ಬದುಕಿಸಿಕೊಂಡಳು.

ಈಶ್ವರನು ಕೈಲಾಸದಲ್ಲಿ ಮೊದಲು ಸನತ್ಕುಮಾರರಿಗೆ ಇದನ್ನು ಉಪದೇಶಿಸಿ,
ಅವರು ಭೂಲೋಕದ ತಪಸ್ವಿಗಳ ಪತ್ನಿಯರಿಗೆ ತಿಳಿಸಿ,ಅವರ ಮೂಲಕ ಎಲ್ಲೆಡೆ ವ್ಯಾಪಿಸಿತು.

ಜ್ಯೋತಿರ್ಭೀಮೇಶ್ವರ ವ್ರತವನ್ನು ಮೊಟ್ಟ ಮೊದಲು ಕೃತಯುಗದಲ್ಲಿ ಮೃಕಂಡ ಮುನಿಯ ಪತ್ನಿ ಸೌಮಿತ್ರೆ
ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ.
ದ್ವಾಪರದಲ್ಲಿ ಶ್ರೀಕೃಷ್ಣನ ಪತ್ನಿ ರುಕ್ಮಿಣಿ.
ಕಲಿಯುಗದಲ್ಲಿ *ರತ್ನವೇಣಿ* ಮಾಡಿದ್ದರು.

ವ್ರತ ಮಾಡುವ ಕ್ರಮ.

ಆಷಾಢ ಅಮವಾಸ್ಯೆಯಂದು,
ಗೋಧೂಳಿ ಸಮಯವಾದ ಸಂಜೆಯಲ್ಲಿ ,ಅಕ್ಕಿಯ ಮೇಲಿಟ್ಟ ಜೋಡಿ ಕಲಶಗಳ ಬಲಕ್ಕೆ ತುಪ್ಪದ,ಎಡಕ್ಕೆ ಎಣ್ಣೆಯ ದೀಪವನ್ನು ಹಚ್ಚಿಟ್ಟು ,ಅರಿಶಿನದ ನೀರಿನಲ್ಲಿ ನೆನಸಿದ ಹಸಿದಾರಕ್ಕೆ 16 ಗಂಟು,ಹಾಕಿ ವಿಳೆಯದೆಲೆ ಅಡಿಕೆಯೊಂದಿಗೆ ಕಲಶದ ಅಕ್ಕಿಯ ಮೇಲಿಟ್ಟು ಈಶ್ವರನ ಸ್ವರೂಪವಾದ ಭೀಮೇಶ್ವರನನ್ನು ಕಲಶ ಮತ್ತು ದೀಪಕ್ಕೆ ಆವಾಹನೆ ಮಾಡಿ,
ಅರ್ಘ್ಯಪಾದ್ಯಾದಿ ಷೋಡಶೋಪಚಾರ,
ಅಂಗಪೂಜೆ,ಪತ್ರ,ಪುಷ್ಪಗಳಿಂದ ಪೂಜೆ,108 ನಾಮ ಪೂಜೆ ಮಾಡಿ,ದಾರದ ಗ್ರಂಥಿ (ಗಂಟು)ಗಳನ್ನೂ ಪೂಜಿಸಿ ನಂತರ ಧೂಪ,ದೀಪಾರತಿ ಮಾಡಿ, ಕಡುಬು,ಚಕ್ಕುಲಿ,
ಪಾಯಸಾದಿ ಪಂಚಭಕ್ಷ್ಯಗಳು,
ವಿಧವಿಧವಾದ ಫಲಗಳನ್ನು,ತಾಂಬೂಲ ಸಹಿತ ನೇವೇದ್ಯ ಮಾಡಿ,ಮಂಗಳಾರತಿ ನೆರವೇರಿಸಿ,ದಾರವನ್ನು

ಮೃತ್ಯುಂಜಯ ನಮಸ್ತುಭ್ಯಂ,
ತವಮೇ ಸೂತ್ರಧಾರಣಂ |

ಸೌಭಾಗ್ಯಂ ಧನ ಧಾನ್ಯಂಚ
ಪ್ರಜಾವೃದ್ಧಿಂ ಸದಾಕುರು ||

ಎಂದು ಪ್ರಾರ್ಥಿಸಿ, ದಾರವನ್ನು ಆಚಾರ್ಯರಿಂದ ಬಲಗೈಗೆ ಕಟ್ಟಿಸಿಕೊಂಡು ವ್ರತದ ಕಥೆಯನ್ನು ಕೈಯಲ್ಲಿ ತೆಂಗಿನಕಾಯಿ,ಅಥವಾ ಯಾವುದಾದರೂ ಹಣ್ಣನ್ನು ಹಿಡಿದುಕೊಂಡು ಕೇಳಿ, ನಂತರ ಕೈಯಲ್ಲಿದ್ದ ಫಲವನ್ನು ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನ ಕೊಡಬೇಕು.
ವ್ರತ ಮುಗಿದ ನಂತರ ಪುರೋಹಿತರಿಗೆ ಉಪಾಯನ ದಾನವನ್ನು, ಕೊಡಬೇಕು.

ವ್ರತದ ಕಥೆ.

ಪೂರ್ವದಲ್ಲಿ ನೈಮಿಷಾರಣ್ಯದಲ್ಲಿದ್ದ ಶೌನಕಾದಿ ಋಷಿಗಳು,ಸಕಲಶಾಸ್ತ್ರ ಪಾರಂಗತರಾದ ಸೂತಪುರಾಣಿಕರನ್ನು “ಸ್ತ್ರೀಯರಿಗೆ ಯೋಗ್ಯ ಪತಿ ಪ್ರಾಪ್ತಿಗೆ, ದೀರ್ಘಸೌಮಂಗಲ್ಯತ್ವಕ್ಕೆ, ಸುಖೀದಾಂಪತ್ಯಕ್ಕಾಗಿ ಆಚರಿಸಬಹುದಾದ ಉತ್ತಮ ವ್ರತ” ಒಂದನ್ನು ಹೇಳಬೇಕೆಂದು ಪ್ರಾರ್ಥಿಸಿದಾಗ ಸೂತಪುರಾಣಿಕರು ಅವರಿಗೆ ಆಷಾಢ ಅಮವಾಸ್ಯೆಯ ಭೀಮೇಶ್ವರ ವ್ರತವು ಬಹಳ ಪುಣ್ಯದಾಯಕ ಎಂದು ಆ ವ್ರತ ಮಹಾತ್ಮ್ಯೆಯನ್ನು ಹೇಳಿದರು.

ಬಹಳ ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ಮಹಾಪರಾಕ್ರಮಿಯಾದ ರಾಜನಿಗೆ, ಜಯಶೇಖರ ಎಂಬ ಸುಂದರನೂ, ಸರ್ವಗುಣಸಂಪನ್ನನಾದ ಮಗನಿದ್ದನು.ಆದರೆ ಅವನು ವಿಧಿವಶದಿಂದ ಅಕಾಲಮರಣಕ್ಕೀಡಾದನು.
ವಜ್ರಬಾಹುವಿಗೆ ಪುತ್ರಶೋಕ ಬಲವಾಗಿ, ತನಗೂ,ತನ್ನ ಪಿತೃಗಳಿಗೂ ತಿಲೋದಕ ಕೊಡುವವರೇ ಇಲ್ಲದಂತಾಯಿತಲ್ಲ ಎಂದು ದುಃಖಿಸುತ್ತ ಕೊನೆಗೊಂದು ನಿರ್ಧಾರಕ್ಕೆ ಬಂದು, “ನನ್ನ ಮಗನ ಈ ಶವಕ್ಕೆ ಯಾರು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆಯೋ ಅವರಿಗೆ ಕೋಟಿ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆ” ಎಂದು ಡಂಗುರ ಸಾರಿಸಿದನು.

ಅದೇ ಊರಿನಲ್ಲಿ ಸಕಲ ವೇದ ಶಾಸ್ತ್ರ ಪಾರಂಗತನಾದರೂ ಕಡುಬಡತನದಿಂದ ಸಂಸಾರ ಸಾಕುವುದೇ ಕಷ್ಟವಾಗಿದ್ದ ಮಾಧವಶರ್ಮನೆಂಬ ಬ್ರಾಹ್ಮಣನು ಇದನ್ನು ಕೇಳಿ,ತನ್ನ ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಕೊಡುತ್ತೇನೆ, ನಮಗಿರುವ ಹದಿನಾಲ್ಕು ಮಕ್ಕಳನ್ನು ಪೋಷಿಸುವುದು ಬಹಳ ಕಷ್ಟವಾಗಿದೆ ಎಂದು ತನ್ನ ಪತ್ನಿ ಸುಶೀಲೆಗೆ ತಿಳಿಸಿದನು.

ಸುಶೀಲೆಯು “ಪತಿಯೇ,ಲೋಕದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಬಹಳ ಆಲೋಚಿಸಿ,ಅತ್ಯುತ್ತಮ ಧನವಂತರ ಮನೆಗೇ ಬಡವರು ಹೆಣ್ಣು ಕೊಟ್ಟರೆ ಅವಮಾನ,ತಪ್ಪದು ಎಂದು ಕೊಡಲಿಚ್ಛಿಸುವುದಿಲ್ಲ.
ಇನ್ನು ನಪುಂಸಕ,ನಿರುದ್ಯೋಗಿ, ಅಂಗಹೀನರಿಗೂ ಕನ್ಯೆಯನ್ನು ಕೊಡುವುದಿಲ್ಲ.
ಹೀಗಿರುವಾಗ ನೀವು ಮೃತನಾದವನಿಗೆ ಮಗಳನ್ನು ಕೊಡುತ್ತೇನೆ ಎನ್ನುವಿರಲ್ಲ!
ಅವಳು ವಿಧವೆಯಾಗಿಯೇ ಬಾಳಬೇಕೇ? ಇದು ಯುಕ್ತವಲ್ಲ” ಎಂದಳು.
ನಿನಗೆ ಒಬ್ಬಳು ಮಗಳು ಕಡಿಮೆ ಎಂದು ಭಾವಿಸಿಕೋ, ನಾನು ಮೃತರಾಜಪುತ್ರನಿಗೆ ಹಿರಿಯ ಮಗಳು ಚಾರುಮತಿಯನ್ನು ಕೊಟ್ಟೇ ಕೊಡುತ್ತೇನೆಂದು ಮದುವೆ ಮಾಡಿಕೊಟ್ಟನು.

ಮಾತಿನಂತೆ ರಾಜನು ಅವನಿಗೆ ಕೋಟಿ ಹೊನ್ನು ಕೊಟ್ಟನು.ನಂತರ ಪುತ್ರನ ಶವವನ್ನು ಸ್ಮಶಾನಕ್ಕೆ ಸಾಗಿಸಿ,ಸೊಸೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲು ಹೇಳಿದನು.
ಆಕೆಯು ಶುಚಿರ್ಭೂತಳಾಗಿ,
ಸರ್ವಾಭರಣ ಧರಿಸಿ,
ಯಥೇಚ್ಛ ಮಂಗಳದ್ರವ್ಯಗಳನ್ನು ದಾನಮಾಡಿ,ಭಕ್ತಿಯಿಂದ ಪರಮೇಶ್ವರನನ್ನು ಧ್ಯಾನಿಸುತ್ತ ,
ಶಾಂತ ಮನಸ್ಸಿನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು.
ಕೂಡಲೇ ಇದ್ದಕ್ಕಿದ್ದಂತೆ ವರ್ಷಧಾರೆಯಾಗಿ ಚಿತೆಯ ಬೆಂಕಿಯು ಆರಿಹೋಯಿತು.

ಸೂರ್ಯನೂ ಮುಳುಗಿ ಕತ್ತಲಾಗಿ ಸ್ವಲ್ಪ ಸಮಯದಲ್ಲಿಯೇ ಗಾಢಾಂಧಕಾರವು ಆವರಿಸಿತು.
ರಾಜ ಪರಿವಾರವು ಅವಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿತು.
ಸ್ಮಶಾನದಲ್ಲಿ ಏಕಾಂಗಿಯಾಗಿದ್ದ ಚಾರುಮತಿಯು ಭಯಗ್ರಸ್ತಳಾಗಿ ನಡುಗುತ್ತ ,ದೈರ್ಯತಂದುಕೊಂಡು ದುಃಖಾತಿಶಯದಿಂದ
“ಭಗವಂತ ಕಾಪಾಡು,ಕಾಪಾಡು” ಎಂದು ದೀನಳಾಗಿ ಪ್ರಾರ್ಥಿಸುತ್ತ ,
“ನೀನು ಹಿಂದೆ ಮಾರ್ಕಂಡೇಯ,
ಸತ್ಯವಾನ,ಚ್ಯವನ,ಮನ್ಮಥ,ಶ್ವೇತವಾಹನ ಮೊದಲಾದ ಅಲ್ಪಾಯುಗಳಿಗೆ ದೀರ್ಘಾಯುವನ್ನು ಕರುಣಿಸಿದವನು.
ನಾನೇನು ಅಪರಾಧ ಮಾಡಿದ್ದೇನೆಂದು ನನಗೀ ಶಿಕ್ಷೆ ? ಕೃಪೆ ಮಾಡು ದೇವ” ಎಂದು ಅಳುತ್ತಲೇ ಪ್ರಜ್ಞಾಹೀನಳಾದಳು.
ಪರಶಿವನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಪ್ರತ್ಯಕ್ಷನಾಗಿ, ಎದ್ದೇಳು ಪುತ್ರಿ.ಬೇಕಾದ ವರವನ್ನು ಕೇಳು” ಎಂದಾಗ ಎಚ್ಚೆತ್ತು ಶಿವನ ಪಾದದ ಮೇಲೆ ತಲೆ ಇಟ್ಟು , ಸೌಮಂಗಲ್ಯ,ಸೌಭಾಗ್ಯ, ಸುಖ ಸಂಪತ್ಸಮೃದ್ಧಿಯನ್ನು ಕೊಡುವ ವ್ರತವನ್ನು ನನಗೆ ಉಪದೇಶಿಸು” ಎಂದು ಬೇಡಿದಳು.ಈಶ್ವರನು ತಥಾಸ್ತು ಎಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಉಪದೇಶಿಸಿ,
ವ್ರತವಿಧಿಯನ್ನು ತಿಳಿಸಿ, ಒಂಬತ್ತು ವರ್ಷ ವ್ರತವನ್ನಾಚರಿಸಿ ನಂತರ ಉದ್ಯಾಪನೆ ಮಾಡಬೇಕು. ನಾಡಿದ್ದು ಆಷಾಢ ಅಮವಾಸ್ಯೆ. ಅಂದು ಇಲ್ಲಿ ಸಿಕ್ಕುವ ವಸ್ತುಗಳನ್ನೇ ವ್ರತಕ್ಕೆ ಬೇಕಾದ ಸಾಮಗ್ರಿಗಳೆಂದು ಮನಸ್ಸಿನಲ್ಲಿ ಭಾವಿಸಿ ವ್ರತ ಆಚರಿಸು.ನಿನ್ನ ಪತಿಯು ನಿದ್ದೆಯಿಂದೆಚ್ಚತ್ತವನಂತೆ ಮೇಲೆದ್ದು ನವತಾರುಣ್ಯದೊಂದಿಗೆ ನಿನ್ನೊಂದಿಗೆ ಇರುತ್ತಾನೆ” ಎಂದು ಹೇಳಿ ಅಂತರ್ಧಾನನಾದನು.

ಚಾರುಮತಿಯು ಸ್ಮಶಾನದ ಮರಗಳಪತ್ರೆ, ಪುಷ್ಪ, ಫಲಾದಿಗಳನ್ನೇ ವ್ರತಸಾಮಗ್ರಿಯಾಗಿ ಭಾವಿಸಿ, ಶುಚಿರ್ಭೂತಳಾಗಿ,ಮಣ್ಣಿನಿಂದ ದೀಪಸ್ತಂಭ ರಚಿಸಿ, ಅಗ್ನಿಯನ್ನಾವಾಹಿಸಿ,
ಸಂಜೆ ಭಕ್ತಿಯಿಂದ ವ್ರತ ಮಾಡಿದಳು.

ವ್ರತಪೂಜಾ ಮಹಿಮೆಯಿಂದ ರಾಜಪುತ್ರನು ಕಣ್ತೆರೆದು ಎದ್ದು, ಆಶ್ಚರ್ಯ ಚಕಿತನಾಗಿ,
ಅಲ್ಲಿಯವರೆಗಿನ ವೃತ್ತಾಂತವನ್ನು ಚಾರುಮತಿಯಿಂದ ಕೇಳಿ ಆನಂದಭರಿತನಾದನು.
ಬೆಳಗಾಗುತ್ತಲೇ ರಾಜಭಟರಿಂದ ವಿಷಯ ತಿಳಿದ ರಾಜ ವಜ್ರಬಾಹುವು ಆಗಮಿಸಿ,
ಚಾರುಮತಿಯಿಂದ ವಿಷಯ ತಿಳಿದು ಸಂತೋಷಗೊಂಡು ಅವಳನ್ನು ಸಮಾಧಾನ ಪಡಿಸಿ,ಇಬ್ಬರನ್ನೂ ಮೆರವಣಿಗೆಯ ಮೂಲಕ ಅರಮನೆಗೆ ಕರೆತಂದು,ಚಾರುಮತಿಯ ಕೈಯಿಂದ ಯಥೇಚ್ಛ ದಾನಧರ್ಮ ಮಾಡಿಸುತ್ತ ,
ಸಂತೋಷದಿಂದ ಇದ್ದನು.”

ಹೀಗೆ ಸೂತಪುರಾಣಿಕರು ಹೇಳಿದ ಕತೆ ಕೇಳಿದ ಶೌನಕಾದಿ ಋಷಿಗಳೂ ಭಕ್ತಿಯಿಂದ ವ್ರತವನ್ನು ಆರಂಭಿಸಿದರು.

ಈ ಕಥೆಯನ್ನು ಯಾರು ಹೇಳುತ್ತಾರೆಯೋ,
ಯಾರು ವ್ರತವನ್ನು ಆಚರಿಸಿ ಈ ಕಥೆಯನ್ನು ಕೇಳುತ್ತಾರೆಯೋ ಅವರೆಲ್ಲ ಇಹದಲ್ಲಿ ಸುಖ ಸಂಪತ್ತನ್ನು ಹೊಂದಿ,
ಪರದಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ.

ಜ್ಯೋತಿರ್ಭೀಮೇಶ್ವರಾರ್ಪಣಮಸ್ತು.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *