BR Govindaswami

ಬಿ.ಆರ್‌.ಗೋವಿಂದಸ್ವಾಮಿ

ಬಿ.ಆರ್‌.ಗೋವಿಂದಸ್ವಾಮಿ (೧೦.೪.೧೯೧೭ – ೨೫.೧.೧೯೬೬): ಸುಪ್ರಸಿದ್ಧ ಪಿಟೀಲು ವಿದ್ವಾಂಸರಾದ ಗೋವಿಂದಸ್ವಾಮಿಯವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ರಾಮಯ್ಯ. ತಾಯಿ ನಾಗಮ್ಮ. ತಂದೆ ಮೃದಂಗ ವಿದ್ವಾಂಸರಾಗಿದ್ದರೆ, ಚಿಕ್ಕಪ್ಪ ಕರ್ನಾಟಕ ಸಂಗೀತ ಗಾಯಕರು ಮತ್ತು ಪಿಟೀಲು ವಾದಕರು. ಸಂಗೀತಗಾರರ ವಂಶ. ಸಾಮಾನ್ಯ ವಿದ್ಯಾಭ್ಯಾಸಕ್ಕಿಂತ ಸಂಗೀತದ ಕಡೆಗೆ ಬೆಳೆದ ಹೆಚ್ಚು ಒಲವು. ಚಿಕ್ಕಪ್ಪನವರಿಂದಲೇ ಪಿಟೀಲು ಮೊದಲ ಪಾಠ, ನಂತರ ಮೃದಂಗ ವಿದ್ವಾನ್ ಎಚ್.ಪುಟ್ಟಚಾರಿಯವರಲ್ಲಿ ಮುಂದುವರೆದ ಸಂಗೀತ ಸಾಧನೆ.

ಪಿಟೀಲು ವಾದನದಲ್ಲಿ ಗಳಿಸಿದ ಪ್ರಭುತ್ವ. ಪ್ರಸಿದ್ಧ ಗಾಯಕರಾದ ಬಿ.ಎಸ್.ಅಯ್ಯಂಗಾರ್‌ ಮತ್ತು ಮೃದಂಗ ವಿದ್ವಾನ್ ಪುಟ್ಟಚಾರಿಯವರೊಡನೆ ಕೈಗೊಂಡ ಭಾರತ ಪ್ರವಾಸ. ಸಿಕಿಂದರಾಬಾದ್, ಪುಣೆ, ಮುಂಬಯಿ, ನಾಗಪುರ, ದೆಹಲಿ, ವಾರಣಾಸಿ ಮುಂತಾದಡೆ ನಡೆಸಿಕೊಟ್ಟ ಕಚೇರಿಗಳಲ್ಲಿ ಗಳಿಸಿದ ಪ್ರಖ್ಯಾತಿ. ಬೆಂಗಳೂರಿನಲ್ಲಿ ನಡೆದ ಹಲವಾರು ಕಚೇರಿಗಳಿಂದ ಪಡೆದ ಜನಪ್ರಿಯತೆ. ಕಿರಿಯ ಕಲಾವಿದರಿಗೆ ನೀಡುತ್ತಿದ್ದ ನಿರಂತರ ಪ್ರೋತ್ಸಾಹ. ಟೈಗರ್‌ ವರದಾಚಾರ್‌, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌ ಮುಂತಾದ ಹಿರಿಯ ವಿದ್ವಾಂಸರಿಗೆ ಸಂಗೀತ ಕಚೇರಿಯಲ್ಲಿ ಕೊಟ್ಟ ಪಿಟೀಲು ವಾದನದ ಸಾಥಿ.
ಮೈಸೂರು ಒಡೆಯರ ದರ್ಬಾರಿನಲ್ಲಿ ಪಿಟೀಲು ನುಡಿಸಿ ಪಡೆದ ಮೆಚ್ಚುಗೆ. ಗದ್ವಾಲ ಸಂಸ್ಥಾನದ ಮಹಾರಾಜರ ಆಹ್ವಾನದ ಮೇರೆಗೆ ಅವರ ಸಮ್ಮುಖದಲ್ಲಿ ಅನೇಕಬಾರಿ ನಡೆಸಿಕೊಟ್ಟ ಕಚೇರಿಗಳು. ಗದ್ವಾಲ ಸಂಸ್ಥಾನದಾದ್ಯಂತ ನಡೆಸಿದ ಕಾರ್ಯಕ್ರಮಗಳು. ವಾರಣಾಸಿಯ ವಿಶ್ವೇಶ್ವರನ ಸನ್ನಿಧಿಯಲ್ಲಿ ದಕ್ಷಿಣೋತ್ರದ ಸಂಗೀತ ವಿದ್ವಾಂಸರ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಡಿತ ಮದನ ಮೋಹನ ಮಾಳವೀಯರಿಂದ ಇವರ ಪಿಟೀಲು ವಾದನಕ್ಕೆ ದೊರೆತ ಪ್ರಶಂಸೆ. ಉತ್ತರ ಭಾರತದಲ್ಲಿ ಪಡೆದ ಖ್ಯಾತಿ.

ಸಂಗೀತ ವಿದ್ವಾಂಸರಿಂದ, ಜನತೆಯಿಂದ ‘ಪ್ರಣವನಾದ‘, ‘ಕಲಾವಿಚಕ್ಷಣ‘ ಮುಂತಾದ ಬಿರುದುಗಳು. ಜಯಚಾಮರಾಜ ಒಡೆಯರ ಸಮ್ಮುಖದಲ್ಲಿ ಕಚೇರಿನಡೆಸಿ ಮಹಾರಾಜರಿಂದ ದೊರೆತ ಬಂಗಾರದ ಪದಕದೊಡನೆ ಸನ್ಮಾನ. ಇವರೇ ಸ್ಥಾಪಿಸಿದ ಸುಧಾ ಸಂಗೀತ ಶಾಲೆಯನ್ನು ಇವರ ಜ್ಞಾಪಕಾರ್ಥವಾಗಿ ಮುಂದುವರೆಸಿಕೊಂಡ ಬಂದ ಮಗ, ಗೋವಿಂದಸ್ವಾಮಿಯವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.82 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *