G Abdul Basheer

ಪ್ರೊ. ಜಿ. ಅಬ್ದುಲ್ ಬಷೀರ್

ಪ್ರೊ. ಜಿ. ಅಬ್ದುಲ್ ಬಷೀರ್ (೬-೫-೧೯೪೭): ವ್ಯಾಕರಣ, ಭಾಷೆ, ಕಾವ್ಯಮೀಮಾಂಸೆ, ವಿಮರ್ಶಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಬ್ದುಲ್ ಬಷೀರ್‌ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ. ತಂದೆ ಅಬ್ದುಲ್ ಗಫೂರ್‌ಸಾಬ್, ತಾಯಿ ಬಿಯಾಂಬಿ. ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿ ಶಾಲೆಯಲ್ಲಿ. ಹೈಸ್ಕೂಲಿಗೆ ಸೇರಿದ್ದು ಹಾರೋಹಳ್ಳಿ ರೂರಲ್ ಹೈಸ್ಕೂಲು. ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾಲಯದಿಂದ.

[sociallocker]೧೯೭೨ರಲ್ಲಿ ಉದ್ಯೋಗಕ್ಕೆ ಸೇರಿದ್ದು ಕಲಿತ ಕಾಲೇಜಿನಲ್ಲೇ ಅಧ್ಯಾಪಕರ ವೃತ್ತಿ ಆರಂಭ. ಕನ್ನಡ ಪ್ರಾಧ್ಯಾಪಕರಾಗಿ. ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿ, ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣ ಸಮಿತಿ, ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ತರಗತಿ ಸಾಹಿತ್ಯ ಸಮಕ್ಷಮ, ಸಾಹಿತ್ಯ ಸಂಗಮ, ಸಿರಿಗನ್ನಡ, ಸವಿಗನ್ನಡ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕೆ.ವಿ.ಎಸ್.ಸಿ. ಕಡ್ಡಾಯ ಕನ್ನಡ ಪಠ್ಯ ರಚನ ಸಮಿತಿಯ ಸದಸ್ಯರಾಗಿ ಹೀಗೆ ಹಲವಾರು ಸಮಿತಿಗಳಲ್ಲಿ ಸೇವೆ. ಜಾತಿ, ಮತ, ಪಂಥದ ಗೊಡವೆ ಇಲ್ಲದೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೈಂಕರ್ಯ, ಸಾಂಸ್ಕೃತಿಕ ರಾಯಭಾರಿಯಾಗಿ ನಾಡಿನುದ್ದಗಲಕ್ಕೂ ಸಂಚಾರ. ವಿದ್ವತ್‌ಪೂರ್ಣ ಉಪನ್ಯಾಸ.

ವ್ಯಾಕರಣ, ಭಾಷೆ, ಕಾವ್ಯ ಮೀಮಾಂಸೆ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ. ಹಳಗನ್ನಡ ವ್ಯಾಕರಣ ವ್ಯಾಖ್ಯಾನದ ಶಬ್ದಮಣಿ ದರ್ಪಣ ದೀಪಿಕೆ, ಕನ್ನಡ ಭಾಷಾ ಕೃತಿಗಳಾದ ವಾಣಿಜ್ಯ ಕನ್ನಡ ಪರಿಚಯ, ಕನ್ನಡ ಪ್ರವೇಶ ಭಾರತಿ (ಭಾಗ ೧, ೨), ಭಾಷೆ : ಕೆಲವು ವಿಚಾರಗಳು, ಕನ್ನಡ ಕಡ್ಡಾಯ ಮೊದಲಾದ ಕೃತಿಗಳು. ಶರಣ ಸಾಹಿತ್ಯ ಚಿಂತನ, ವಾಙ್ಞಯ ವಿಹಾರ, ವಿವೇಕ, ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಹರಿದಾಸ ಸಾಹಿತ್ಯ ಮೊದಲಾದ ವಿಮರ್ಶಾ ಕೃತಿಗಳು. ಮೌಲನಾ ಅಬ್ದುಲ್ ಕಲಾಂ ಆಜಾದ್, ಹರಿದಾಸ ಬಡೇ ಸಾಹೇಬರು, ಶಿಕ್ಷಣ ಶಿಲ್ಪಿ ಪ್ರೊ. ಎನ್. ಅನಂತಾಚಾರ್-ಜೀವನಚರಿತ್ರೆ. ಹೊಸ ಅಲೆಗಳು, ಹೊಸಗನ್ನಡ ಕವಿತೆಗಳು-ಸಂಪಾದಿತ ಕವಿತೆಗಳು. ಬಂಧ-ಪ್ರಬಂಧ, ಚಿಂತನ-ಪ್ರಬಂಧ ಸಂಕಲನಗಳು. ಸೆರಗು ಕಣ್ಣೊತ್ತಿ ಅಳುತಾಳೆ-ಜಾನಪದ ಕೃತಿ ಮುಂತಾದ ೨೦ಕ್ಕೂ ಹೆಚ್ಚು ಕೃತಿ ಪ್ರಕಟಿತ.

ಬೆಂಗಳೂರಿನ ಆಕಾಶವಾಣಿ, ದೂರದರ್ಶನದಲ್ಲಿ ನೂರಾರು ಚಿಂತನ, ಭಾಷಣ, ಚರ್ಚೆಗಳಲ್ಲಿ ಭಾಗಿ. ಅನ್ಯಭಾಷಿಕರು ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಸೇರಬೇಕಾದ ಅನಿವಾರ್ಯತೆಯ ವಿಷಯ ಪ್ರಮುಖ ಪ್ರಸ್ತಾಪ.

ಸಂದ ಗೌರವ ಪ್ರಶಸ್ತಿಗಳು-ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ-ಕನಕಪುರದಲ್ಲಿ ನಡೆದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

One comment

  1. ಶ್ಯಾಮ ಸುಂದರ

    ಶ್ರೀಯುತರಿಗೆ ನಮನಗಳು. ತಮ್ಮ ಈ ದಿನದ ವಿಜಯ ವಾಣಿ ದಿನಪತ್ರಿಕೆ ಯಲ್ಲಿ ಮೂಡಿರುವ ಅಂತರಂಗದ ಶೀರ್ಷಿಕೆ ಯಲ್ಲಿ ಇರುವ ವಿಷಯದ ಬಗ್ಗೆ ನನ್ನ ಅಭಿನಂದನೆಗಳು, ಹಾಗೂ ಇತರ ಅಭಿಪ್ರಾಯ ಗಳ ಬಗ್ಗೆ ತಮ್ಮೊಡನೆ ಮಾತನಾಡಲು ಇಚ್ಛಿಸುತ್ತೇನೆ. ನನ್ನ ಮೊಬೈಲ್ ಸಂ. 9986062531.
    ಸಮಯದ ಅನುಕೂಲ ತಿಳಿಸಿದರೆ ಸಂಪರ್ಕಿಸಿರಿ.

Leave a Reply

Your email address will not be published. Required fields are marked *