ನೀರ್ಪಾಜೆ ಭೀಮಭಟ್ಟ (೧೨.೦೪.೧೯೩೪ – ೧೨.೧೨.೨೦೦೨): ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರಕ್ಕೆ ಪಾತ್ರರಾದ ನೀರ್ಪಾಜೆ ಭೀಮಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ೧೯೩೪ರ ಏಪ್ರಿಲ್ ೧೨ರಂದು. ತಂದೆ ಶಂಕರಭಟ್ಟರು, ತಾಯಿ ಲಕ್ಷ್ಮೀ ಅಮ್ಮ.
ಸಂಸ್ಕೃತ ಶಿಕ್ಷಣ ಪಡೆದದ್ದು ಕಾಸರಗೋಡು ತಾಲ್ಲೂಕು ಪೆರಡಾಲದ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಸಾಹಿತ್ಯ ಶಿರೋಮಣಿ ಪದವಿಯ ಜೊತೆಗೆ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ವಿಶಾರದರು.
ವಿದ್ಯಾರ್ಥಿದೆಸೆಯಲ್ಲಿಯೇ ರಚಿಸಿದ್ದು ಕಾಶ್ಮೀರ ಸಂಧಾನ ಸಮುದ್ಯಮ:, ಹೈದ್ರಾಬಾದ್ ವಿಜಯಂ ಮತ್ತು ಗೋವಾ ಸ್ವಾತಂತ್ರ್ಯಂ ಮುಂತಾದ ಸಂಸ್ಕೃತ ನಾಟಕಗಳು. ಈ ನಾಟಕಗಳು ಕಾಸರಗೋಡಿನಲ್ಲಿ ಪ್ರದರ್ಶನಗೊಂಡಾಗ ಕೆ. ಆರ್. ಕಾರಂತ, ಮಾಸ್ತಿ ಮುಂತಾದವರು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಜೊತೆಗೆ ರಾಷ್ಟ್ರೀಯ ಸಂಸ್ಕೃತ ಗ್ರಂಥವಾದ ‘ಸಂಸ್ಕೃತ್ ಕೆ ಆಧುನಿಕ್ ನಾಟಕಕಾರ್’ ಎಂದು ಇವರ ನಾಟಕಗಳನ್ನು ಉಲ್ಲೇಖಿಸಿದ್ದಲ್ಲದೆ ಡಾ. ಎಸ್. ರಾಧಾಕೃಷ್ಣನ್ ರವರು ಸಂಪಾದಿಸಿರುವ ‘ಭಾರತೀಯ ಕವಿತಾ – ೧೯೫೫’ ಸಂಪುಟದಲ್ಲೂ ಇವರ ಕವಿತೆ ಸೇರ್ಪಡೆಯಾಗರುವುದೂ ಒಂದು ವಿಶೇಷ.
ಸಂಸ್ಕೃತದಿಂದ ಅನುವಾದಿಸಿರುವ ನಾಟಕಗಳಲ್ಲಿ ಮಾಲತಿ ಮಾಧವ, ಮಣ್ಣಿನ ಬಂಡಿ, ಮಾಳವಿಕಾಗ್ನಿ ಮಿತ್ರ, ಊರ್ವಶಿ ಪ್ರಮುಖವಾದ ನಾಟಕಗಳು. ಇವಲ್ಲದೆ ರಾಜಶೇಖರನ ಕಾವ್ಯಮೀಮಾಂಸೆ, ಮಹಾಕವಿ ಬಿಲ್ಹಣನ ವಿಕ್ರಮಾಂಕದೇವ ಚರಿತಂ ಮುಂತಾದವುಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡ ಭೀಮಭಟ್ಟರು ಕಡೆಂಗೋಡ್ಲು ಶಂಕರಭಟ್ಟರ ರಾಷ್ಟ್ರಮತ ಪತ್ರಿಕೆಯಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದ ನಂತರ ಹುಬ್ಬಳ್ಳಿಗೆ ತೆರಳಿ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲೂ ಕೆಲಕಾಲ ಕಾರ್ಯ ನಿರ್ವಹಿಸಿ ಪುನ: ಊರಿಗೆ ಹಿಂದಿರುಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಇದೇ ಸಮಯದಲ್ಲಿ ಜನವಾಹಿನಿ, ನೇತ್ರಾವತಿ ವಾರ್ತೆ ಮುಂತಾದ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ತೊಡಗಿಸಿಕೊಂಡಿದ್ದು ಈ ಲೇಖನಗಳು ಚೌ ಚೌ, ಚಿತ್ರಾನ್ನ, ಶೂನ್ಯವೇಳೆ, ಸೋತುಗೆದ್ದವರು, ನಾಮದ ಫಲ, ಹೆಂಡತಿ ಮತ್ತು ಪೆಟ್ಟು ಮುಂತಾದ ಸಂಕಲನಗಳಲ್ಲಿ ಸೇರಿವೆ.
ಇದಲ್ಲದೆ ಇವರು ರಚಿಸಿದ ಇತರ ಕೃತಿಗಳೆಂದರೆ ಹಸ್ತ ಶುದ್ಧಿ (ವಿಡಂಬನೆ), ರಸವತ್, ಮನನ, ಸಾಹಿತ್ಯ ಪ್ರಜ್ಞೆ (ಪ್ರಬಂಧಗಳು), ಯುಗ ಪುರುಷ ಉಡುಪರು (ವ್ಯಕ್ತಿ ಚಿತ್ರ), ಕಾಲಿದಾಸ ಸಮೀಕ್ಷೆ (ವಿಮರ್ಶೆ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಇವೆಲ್ಲಕ್ಕಿಂತ ಪ್ರಸಿದ್ಧಿಯನ್ನು ತಂದುಕೊಟ್ಟ ಕೃತಿ ಎಂದರೆ ಕಲ್ಹಣನ ರಾಜತರಂಗಿಣಿ. ಈ ಕೃತಿಯು ಭಾರತೀಯ ಸಾಹಿತ್ಯದಲ್ಲೇ ಅಪೂರ್ವ ಕೃತಿಯಾಗಿದ್ದು , ಇದು ಇಂಗ್ಲಿಷ್, ಫ್ರೆಂಚ್, ಜರ್ಮನ್, ಪಾರ್ಸಿಗಳಿಗೆ ಅನುವಾದಗೊಡಿದ್ದು ಭಾರತೀಯ ಭಾಷೆಗಳಾದ ಹಿಂದಿ, ಮರಾಠಿಯಲ್ಲದೆ ಕನ್ನಡಕ್ಕೆ ಅನುವಾದವಾಗಿದ್ದು, ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಮೂರನೆಯ ಭಾಷಾ ಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಪ್ರಾಚೀನ ಕಾಲದಿಂದ ಆರಂಭಿಸಿ ೧೨ನೇ ಶತಮಾನದವರೆಗಿನ ಕಾಶ್ಮೀರ ರಾಜ್ಯದಲ್ಲಿನ (ಕಲ್ಹಣನ ಕಾಲ ಸುಮಾರು ೧೧೦೦- ೧೨೦೦) ರಾಜಮಹಾರಾಜರ ಚರಿತೆ, ಆಡಳಿತದಲ್ಲಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ಮೂಢ ನಂಬಿಕೆ, ಸಾಮಾಜಿಕ ಅನಿಷ್ಟಗಳು,, ಪ್ರಜೆಗಳ ಕಷ್ಟಕಾರ್ಪಣ್ಯಗಳು, ಸಮಾಜ ಕಂಟಕರು, ಭಷ್ಟಾಚಾರಿಗಳು, ಕಂದಾಯ – ತೆರಿಗೆ ಪದ್ಧತಿ ಮುಂತಾದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದ್ದು ಇದನ್ನು ಕನ್ನಡಕ್ಕೆ ಗದ್ಯರೂಪದಲ್ಲಿ ತಂದ ಭೀಮಭಟ್ಟರ ಕಾರ್ಯ ಪ್ರಶಂಸನೀಯ.
ಕರ್ನಾಟಕ ಸಾಹಿತ್ಯ ಅಕಾಡಮಿಯ ಅನುದಾನ ಪಡೆದು ಕಾಶ್ಮೀರ ರಾಜ್ಯದಲ್ಲಿ ಸಂಚರಿಸಿ ಬನಾರಸ್, ಬರೋಡ ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿ ರಚಿಸಿದ ಕೃತಿ ಇದಾಗಿದೆ.
ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದ ಭೀಮಭಟ್ಟರು ಮಂಡಲ ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ – ಹೀಗೆ ರಾಜಕೀಯ, ಸಾಹಿತ್ಯ, ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ತಮ್ಮದೇ ಅಭ್ಯುದಯ ಪ್ರಕಾಶನದಡಿಯಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ೧೯೯೮ ರಲ್ಲಿ ಅಭಿಮಾನಿಗಳು, ಸಾಹಿತ್ಯಾಸಕ್ತರು ಕೂಡಿ ಅರ್ಪಿಸಿದ ಗೌರವ ಗ್ರಂಥ ‘ಅಭ್ಯುದಯ’.
ಹೀಗೆ ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಕಾರ್ಯವನ್ನು ಸಾಧಿಸಿದ ಭಟ್ಟರು ಸಾಹಿತ್ಯ ಲೋಕದಿಂದ ದೂರವಾದದ್ದು ೨೦೦೨ ರ ಡಿಸೆಂಬರ್ ೧೨ ರಂದು. ೨೦೦೩ ರಲ್ಲಿ ‘ಶಿರೋಮಣಿ’ ಎಂಬ ಸಂಸ್ಮರಣ ಗ್ರಂಥವು ಪ್ರಕಟವಾಗಿದ್ದಲ್ಲದೆ ನೀರ್ಪಾಜೆಯವರ ಹೆಸರನ್ನು ಚಿರಸ್ಥಾಯಿಗೊಳಿಸಲು ೨೦೦೪ ರಲ್ಲಿ ‘ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನ’ ವು ಪ್ರಾರಂಭವಾಗಿದ್ದು ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.