ದೇವರನ್ನು ಮೆಚ್ಚಿಸಲು ಕೇವಲ ಉದ್ದಂಡ ನಮಸ್ಕಾರ ಹಾಕಿದರೆ ಸಾಲದು, ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿ ದ್ದೇವೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದವ ರಾರೂ ಪ್ರದಕ್ಷಿಣೆ ಹಾಕದೆ ಬರುವುದಿಲ್ಲ. ಪ್ರದಕ್ಷಿಣೆಗೆ ನಮ್ಮ ಜನ್ಮಜನ್ಮಾಂತರಗಳ ಪಾಪಗಳನ್ನು ಕಳೆಯುವ ಶಕ್ತಿಯಿದೆ ಎಂದು ಪುರೋಹಿತರು ಹೇಳುತ್ತಾರೆ. ಆದ್ದರಿಂದಲೇ ಪೂಜಾ ಪ್ರಯೋಗ ವಿಧಿಗಳಲ್ಲಿ ಕೇವಲ ‘ನಮಸ್ಕಾರಂ ಕುರ್ಯಾತ್’ ಎಂದು ಎಲ್ಲೂ ಹೇಳುವುದಿಲ್ಲ. ಬದಲಿಗೆ ‘ಪ್ರದಕ್ಷಿಣ ನಮಸ್ಕಾರಂ ಕುರ್ಯಾತ್’ ಎಂದೇ ಎಲ್ಲೆಡೆ ಹೇಳಲಾಗಿದೆ.
ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿರ್ವಿಜ್ಞಾನ. ಈ ಜಗತ್ತು ಒಂದು ಶಕ್ತಿಯ ಸುತ್ತ ಯಾವಾಗಲೂ ಸುತ್ತುತ್ತಿರುತ್ತದೆ. ವಿಶ್ವಕ್ಕೆ ಸೂರ್ಯನು ಪರಮೋಚ್ಚ ಶಕ್ತಿ. ಭೂಮಿಯೂ ಸೇರಿದಂತೆ ಎಲ್ಲಾ ಗ್ರಹಗಳೂ ಸೂರ್ಯನ ಸುತ್ತ ಸದಾಕಾಲ ಸುತ್ತುತ್ತಿರುತ್ತವೆ.
ಹಾಗೆ ಸುತ್ತುವುದರಿಂದಲೇ ಭೂಮಿಯ ಮೇಲೆ ನಮಗೆ ಜೀವ ಹಿಡಿದಿಟ್ಟುಕೊಳ್ಳಲು ಬೇಕಾದ ಬೆಳಕು, ಗಾಳಿ, ನೀರು ಇತ್ಯಾದಿ ಶಕ್ತಿಮೂಲಗಳು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿವೆ. ಪ್ರಕೃತಿಯೇ ದೇವರು ಎಂದು ನಂಬಿರುವ ಹಿಂದೂಗಳು ತಮ್ಮ ಪೂಜಾವಿಧಿಯನ್ನೂ ಪ್ರಕೃತಿ ನಿಯಮಕ್ಕೆ ಅನುಗುಣವಾಗಿಯೇ ರೂಪಿಸಿ ಕೊಂಡಿದ್ದಾರೆ. ಹೇಗೆ ಸೂರ್ಯನಿಂದ ಭೂಮಿಗೆ ಶಕ್ತಿ ಸಿಗುತ್ತದೆಯೋ ಹಾಗೆ ದೇವರು ಎಂಬ ಪರಮೋಚ್ಚ ಶಕ್ತಿಯ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ನಮಗೂ ಶಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಮೇಲಾಗಿ, ಪ್ರದಕ್ಷಿಣೆಯು ಏಕರೂಪದ ಪುನರಾವರ್ತಿ ಕ್ರಿಯೆಯಾಗಿರುವುದರಿಂದ ಅಲ್ಲಿ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. ಯಾವುದಾದರೂ ಒಂದು ಶಕ್ತಿಗೆ ಸಂಪೂರ್ಣ ಶರಣಾಗಲು ಈ ಏಕಾಗ್ರತೆ ಅತ್ಯಗತ್ಯ. ದೇವರನ್ನು ಪೂಜಿಸುವುದು ಅಂದರೆ ಆತನಿಗೆ ಎಲ್ಲಾ ರೀತಿಯಲ್ಲೂ ಶರಣಾಗುವುದು ಎಂದೇ ಅರ್ಥ. ಪ್ರದಕ್ಷಿಣೆ ಆ ಉದ್ದೇಶವನ್ನೂ ಈಡೇರಿಸುತ್ತದೆ.
epaper.kannadaprabha.in
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.