DK Bhimsenrao

ಡಿ.ಕೆ. ಭೀಮಸೇನರಾವ್

ಡಿ.ಕೆ. ಭೀಮಸೇನರಾವ್ (೮.೪.೧೯೦೪ – ೨೯.೧೧.೧೯೬೯): ಹುಟ್ಟಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಅಯ್ಯನವರ ಮಠದಲ್ಲಿ. ನಿಜಾಮರ ಆಡಳಿತಕ್ಕೊಳಪಟ್ಟಿದ್ದರಿಂದ ನಿರ್ವಾಹವಿಲ್ಲದೆ ಉರ್ದುಭಾಷೆ ಕಲಿಕೆ. ೧೯೨೨ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಕನ್ನಡದಲ್ಲಿ ಪ್ರಥಮ ಸ್ಥಾನ. ಇದರಿಂದ ಉತ್ತೇಜಿತರಾಗಿ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇರುವ ಬಯಕೆ. ೧೯೨೭ರಲ್ಲಿ ಮೈಸೂರು ವಿ.ವಿ.ದಲ್ಲಿ ಕನ್ನಡ ಎಂ.ಎ. ತರಗತಿ ಪ್ರಾರಂಭ. ೧೯೨೯ರಲ್ಲಿ ಎಂ.ಎ. ಪದವಿ. ಇವರ ಸಹಪಾಠಿಗಳು ಕುವೆಂಪು, ಡಿ.ಎಲ್.ಎನ್. ಕೆ. ವೆಂಕಟರಾಮಪ್ಪ, ಎನ್. ಅನಂತರಂಗಾಚಾರ್ ಮುಂತಾದವರು.

ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಪುನಃ ಉಸ್ಮಾನಿಯ ವಿ.ವಿ.ದ ಕನ್ನಡ ವಿಭಾಗದಲ್ಲಿ ಬೋಧಕರಾಗಿ, ಸಂಶೋಧಕರಾಗಿ ವೃತ್ತಿ ಆರಂಭ. ಮುಂದೆ ಅಲ್ಲೇ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ತಮ್ಮ ಅಕಾರಾವಯಲ್ಲಿ ಕನ್ನಡ ವಿಭಾಗವನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ ಹೈದರಾಬಾದಿನ ಆರೇಳು ಕಾಲೇಜುಗಳಲ್ಲಿ ಕನ್ನಡ ಅಧ್ಯಯನಕ್ಕಾಗಿ ಮಾಡಿದ ವ್ಯವಸ್ಥೆ. ಗುಲಬರ್ಗಾ, ಯಾದಗಿರಿ, ರಾಯಚೂರು ಪ್ರದೇಶಗಳಲ್ಲಿ ಕನ್ನಡ ವ್ಯಾಸಂಗಕ್ಕಾಗಿ ಏರ್ಪಾಡು, ಹಳೆಯ ಹೈದ್ರಾಬಾದು ಕರ್ನಾಟಕದಲ್ಲಿ ಕನ್ನಡ ಕೀರ್ತಿಯನ್ನು ಬೆಳಗಿಸಲು ಭಾಷಾ ಸೇವಕರಾಗಿ ದುಡಿಮೆ.

ಕನ್ನಡ ಸಾಹಿತ್ಯವನ್ನು ಬೆಳೆಸಲು ಹೈದರಾಬಾದ್ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿ ಸೇವೆ. ಇದಕ್ಕೊಂದು ಸ್ವಂತ ಕಟ್ಟಡ ಕಟ್ಟಿಸುವಲ್ಲಿ ಶ್ರಮ ಸಫಲ. ಸಂಘದ ಆಶ್ರಯದಲ್ಲಿ ಹಲವಾರು ಕೃತಿ ಪ್ರಕಟಣೆ. ಪ್ರತಿವರ್ಷ ನಾಡಹಬ್ಬದ ಆಚರಣೆ. ನೃಪತುಂಗ ಶಾಲೆ, ಶಾರದಾ ಕನ್ಯಾಶಾಲೆಗಳನ್ನು ಒಂದೇ ಆಡಳಿತಕ್ಕೊಳಪಡಿಸಿ ಅಧ್ಯಕ್ಷರಾದರು. ನಿಘಂಟು ಸಂಪಾದಕ ಮಂಡಲಿಯಲ್ಲಿ ಕೊನೆವರೆಗೂ ದುಡಿತ, ಕನ್ನಡ ವಿಶ್ವಕೋಶದ ಪ್ರಥಮ ಸಂಪಾದಕ ಮಂಡಲಿಯ ಸದಸ್ಯರು. ರಾಯಚೂರಿನಲ್ಲಿ ನಡೆದ ಹೈದರಾಬಾದ್ ಕರ್ನಾಟಕ ಪ್ರಾಂತದ ಸಾಹಿತ್ಯ ಸಮ್ಮೇಳನದ ಪ್ರಥಮಾಧ್ಯಕ್ಷರು. ಇವರ ಸೇವೆಗೆ ಮೈಸೂರು ಸರ್ಕಾರದಿಂದ ರಾಜ್ಯಪ್ರಶಸ್ತಿ, ಇವರ ಮತ್ತೊಂದು ಆಸಕ್ತಿಯ ಕಾರ‍್ಯಕ್ಷೇತ್ರವೆಂದರೆ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆ. ಇವರು ಸಂಗ್ರಹಿಸಿದ ಹಸ್ತಪ್ರತಿಗಳನ್ನು ಉಸ್ಮಾನಿಯ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿ ಇಂದಿಗೂ ನೋಡಬಹುದು. ಕನ್ನಡಕ್ಕಾಗಿ ದುಡಿಯುತ್ತಲೇ ನಿಧನರಾದದ್ದು ೨೯.೧೧.೧೯೬೯ರಲ್ಲಿ.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.85 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *