ಡಾ. ಯು. ಮಹೇಶ್ವರಿ (೧೮-೩-೧೯೫೮): ಕರ್ನಾಟಕ, ಕೇರಳ ಗಡಿ ಪ್ರದೇಶದ ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಸದಾ ಪರಿತಪಿಸುತ್ತಿರುವ ಡಾ. ಮಹೇಶ್ವರಿಯವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕಿನ ಬೇಳಗ್ರಾಮಕ್ಕೆ ಸೇರಿದ ಉಳ್ಳೋಡಿ ಎಂಬ ಹಳ್ಳಿಯಲ್ಲಿ. ತಂದೆ ಗಂಗಾಧರಭಟ್ಟ, ತಾಯಿ ಸರಸ್ವತಿ ಅಮ್ಮ. ಎಂಟನೆಯ ಮಗುವಾಗಿ (ಅವಳಿ-ಜವಳಿ) ಹುಟ್ಟಿದ ಹೆಣ್ಣು ಮಗುವೇ ಮಹೇಶ್ವರಿಯವರು. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ. ಓದಿನಲ್ಲಿ ಯಾವಾಗಲೂ ಮುಂದು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಪ್ರಥಮ ಸ್ಥಾನ. ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ), ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಸಂಸ್ಥೆಯಿಂದ ಎಂ.ಎ. (ಇಂಗ್ಲಿಷ್), ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ‘ಕನ್ನಡದ ಮೊದಲ ಕಾದಂಬರಿಗಳು-ಒಂದು ಸ್ತ್ರೀವಾದಿ ಅಧ್ಯಯನ’ದ ಮೇಲೆ ಪಡೆದ ಪಿಎಚ್.ಡಿ. ಪದವಿ.
ಪದವಿಯ ನಂತರ ಉದ್ಯೋಗದ ಬೇಟೆ. ತಾತ್ಕಾಲಿಕವಾಗಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ. ಇದೀಗ ಹಿರಿಯ ಶ್ರೇಣಿಯ ಕನ್ನಡ ಉಪನ್ಯಾಸಕಿಯಾಗಿ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಸೇವೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯ ಮತ್ತು ಸುಗಮ ಸಂಗೀತ ಸ್ಪರ್ಧೆಗಳಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಗಳಿಸಿದ ಹಲವಾರು ಬಹುಮಾನಗಳು.
ಹಲವಾರು ಕೃತಿ ರಚನೆ-ಮುಗಿಲಹಕ್ಕಿ (ಕವನ ಸಂಕಲನ). ಇದು ಮಾನುಷಿಯ ಓದು (ವಿಮರ್ಶೆ, ಸಂಶೋಧನೆ). ಮಧುರವೇ ಕಾರಣ (ವೈಚಾರಿಕ ಲೇಖನಗಳ ಸಂಕಲನ). ಧರೆಯುಗರುವದಿ ಮೆರೆಯಲಿ (ಕವನಸಂಕಲನ) ಪ್ರಕಟಿತ.
ಆಕಾಶವಾಣಿ ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ, ಆಕಾಶವಾಣಿ ಯುಗಾದಿ ಕವಿಗೋಷ್ಠಿ, ಮೈಸೂರು ದಸರಾ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿ ಕವಿ ಸಮಯ (ಗೋಷ್ಠಿ), ಕುವೆಂಪು ಶತಮಾನೋತ್ಸವದ ಉಡುಪಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಕವಿಗೋಷ್ಠಿ, ಪುತ್ತೂರಿನ ಸೇಡಿಯಾಪು ಶತಮಾನೋತ್ಸವ ಕಾರ್ಯಕ್ರಮ, ಕನಕಪುರ, ಮೂಡಿಬಿದಿರೆ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ಮುಂತಾದ ಕವಿಗೋಷ್ಠಿಗಳಲ್ಲಿ ಭಾಗಿ.
ಸಂದ ಪ್ರಶಸ್ತಿಗಳು-ಮುಗಿಲ ಹಕ್ಕಿ ಕವನ ಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ಇದು ಮಾನುಷಿಯ ಓದು ವಿಮರ್ಶಾಕೃತಿಗೆ ವಿ. ಎಂ. ಇನಾಂದಾರ್ ಪ್ರಶಸ್ತಿ, ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಅಣ್ಣಯ್ಯ ಮಾಸ್ತರ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.