Chandra Guptha Maurya

ಚಂದ್ರಗುಪ್ತ ಮೌರ್ಯ

Chandra Guptha
ಚಂದ್ರಗುಪ್ತ ಮೌರ್ಯ (Statue of a standing young man in red stone.)

ಚಂದ್ರಗುಪ್ತ ಮೌರ್ಯ (ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು) ಹುಟ್ಟಿದ್ದು ಕ್ರಿಸ್ತಪೂರ್ವ ೩೪೦ ರಲ್ಲಿ . ಆಳಿದ್ದು ಕ್ರಿಸ್ತಪೂರ್ವ ೩೨೦ -೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ ನಿಜವಾದ ಸಾಮ್ರಾಟ್ ಎಂದು ಪರಿಗಣಿಸುತ್ತಾರೆ .

ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು. ಚಂದ್ರಗುಪ್ತನ ವಿಜಯದ ನಂತರ ಮೌರ್ಯ ಸಾಮ್ರಾಜ್ಯವು ಪೂರ್ವದಲ್ಲಿ ಬೆಂಗಾಲ್ ಮತ್ತು ಆಸ್ಸಾಮದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ಥಾನ ಮತ್ತು ಬಲೂಚಿಸ್ಥಾನ ದವರೆಗೂ , ಉತ್ತರದಲ್ಲಿ ವಾಯುವ್ಯ ಕಾಶ್ಮೀರ ಮತ್ತು ಈಶಾನ್ಯನೇಪಾಳದಿಂದ ದಕ್ಷಿಣದಲ್ಲಿ ಡೆಕ್ಕನ್ ಪ್ರಸ್ಥಭೂಮಿಯವರೆಗೂ ಹಬ್ಬಿತ್ತು.

ಕೇವಲ ಇಪ್ಪತ್ತು ವರ್ಷದವನಿರುವಗಲೇ ಅಲೆಕ್ಸಾಂಡರನ ಸೈನ್ಯವನ್ನು ಸೋಲಿಸಿ ನಂದ ಸಾಮ್ರಾಜ್ಯವನ್ನು ಗೆದ್ದಿದ್ದು ,ಸೆಲ್ಯೂಕಸ್ ನಿಕೇಟರ್ ನನ್ನು ಸೋಲಿಸಿದ್ದು ಮತ್ತು ದಕ್ಷಿಣ ಏಶಿಯಾದಾದ್ಯಂತ ಕೇಂದ್ರೀಕೃತ ಆಳಿಕೆಯನ್ನು ನೆಲೆಗೊಳಿಸಿದ್ದು – ಈ ಘಟನೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥವು ಆಗಿವೆ . ಎರಡು ಸಾವಿರ ವರ್ಷಗಳನಂತರವೂ ಚಂದ್ರಗುಪ್ತ ಮತ್ತು ಅಶೋಕ ನೂ ಸೇರಿದಂತೆ ಅವನ ನಂತರ ಬಂದ ರಾಜರ ಸಾಧನೆಗಳು ದಕ್ಷಿಣ ಏಶಿಯ ಮತ್ತು ಜಾಗತಿಕ ಇತಿಹಾಸದ ಅಧ್ಯಯನದ ವಸ್ತುಗಳಾಗಿವೆ.

ಚಂದ್ರಗುಪ್ತನು ಪೂರ್ವ ಭಾರತದ ಮಗಧದ ನಂದ ವಂಶಕ್ಕೆ ಸೇರಿದ ಒಬ್ಬ ರಾಜನಿಗೆ ಮುರಾ ಎಂಬ ದಾಸಿಯಲ್ಲಿ ಹುಟ್ಟಿದ ಕಾನೂನುಬಾಹಿರ ಮಗು ಎಂಬ ಅಭಿಪ್ರಾಯವನ್ನು ಅನೇಕ ಭಾರತೀಯ ಇತಿಹಾಸಕಾರರು ಹೊಂದಿರುವರಾದರೂ ಚಂದ್ರಗುಪ್ತನನ್ನು ನವಿಲು (ಸಂಸ್ಕೃತದಲ್ಲಿ ‘ಮಯೂರ’) ಸಾಕುವವರು ಸಲಹಿದ ಕಾರಣಕ್ಕಾಗಿ ಮೌರ್ಯ ಎಂಬ ಹೆಸರು ಬಂದಿತು ಎಂದು ನಂತರದ ಸಾಹಿತ್ಯಿಕ ಪರಂಪರೆಗಳು ಸೂಚಿಸುತ್ತವೆ. ಮೋರಿಯ (ಮೌರ್ಯ) ಶಬ್ದಕ್ಕೂ ಮೋರಾ ( ಅಥವಾ ಮಯೂರ) ಶಬ್ದಕ್ಕೂ ಇರಬಹುದಾದ ಸಂಬಂಧವನ್ನು ಬೌದ್ಧ ಮತ್ತು ಜೈನ ಧರ್ಮಗಳೆರಡರ ಪರಂಪರೆಗಳೂ ಹೇಳುತ್ತವೆ. ನೇಪಾಳ ಮತ್ತು ಉತ್ತರಪ್ರದೇಶಗಳ ನಡುವೆ ಇದ್ದ ಹಳೇಯ ಕಾಲದ ಪಿಪ್ಪಲಿವನ ಎಂಬ ಸಣ್ಣ ಗಣರಾಜ್ಯದ ಮೋರಿಯ ಎಂಬ ಕ್ಷತ್ರಿಯಯೋಧರ ಕುಲಕ್ಕೆ ಚಂದ್ರಗುಪ್ತನು ಸೇರಿದವನೆಂದು ಹೇಳುವ ಸಾಹಿತ್ಯಪರಂಪರೆಗಳೂ ಇವೆ. ಇದೇ ರೀತಿ ಇನ್ನೂ ಹಲವು ಸಿದ್ಧಾಂತ ಗಳು ಅವನು ಇಂದಿನ ಪಾಕಿಸ್ತಾನದಲ್ಲಿರುವ ಗಾಂಧಾರ ಅಥವಾ ಕಾಂಭೋಜಕ್ಕೂ ಸಂಬಂಧಪಟ್ಟವನು ಎಂದು ಹೇಳುತ್ತವೆ.

ಆರಂಭಿಕ ಜೀವನ: ಚಂದ್ರಗುಪ್ತನ ಬಾಲ್ಯದ ಬಗ್ಗೆ ತಿಳಿದುಬಂದಿರುವದು ಕಡಿಮೆ. ನಂತರದ ಸಂಸ್ಕೃತ ಸಾಹಿತ್ಯ ಮತ್ತು ಗ್ರೀಕ್ , ಲ್ಯಾಟಿನ್ ಮೂಲಗಳಿಂದ ಕೆಲವು ವಿಷಯ ಗೊತ್ತಾಗಿದೆ.

ಸಾಂಪ್ರದಾಯಿಕ ಮೂಲಗಳ ಪ್ರಕಾರ ಅಲೆಕ್ಸಾಂಡರ್ ನ ಆಕ್ರಮಣದ ಸಮಯದಲ್ಲಿ ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದ ಚಾಣಕ್ಯನು ಪೂರ್ವಭಾರತದ ಮಗಧ ರಾಜ್ಯದಲ್ಲಿ ಹುಡುಗ ಚಂದ್ರಗುಪ್ತನನ್ನು ನೋಡಿದನು. ಕತೆಯ ಪ್ರಕಾರ ಗೆಳೆಯರೊಂದಿಗಿನ ಆಟದಲ್ಲಿ ರಾಜನಾಗಿದ್ದ ಚಂದ್ರಗುಪ್ತನು ಅಪರಾಧಿಯ ಪಾತ್ರ ವಹಿಸಿದ್ದ ಇನ್ನೊಬ್ಬ ಹುಡುಗನ ವಿಚಾರಣೆಯನ್ನು ಮಾಡಿ ಶಿಕ್ಷೆ ವಿಧಿಸುತ್ತಿದ್ದನು. ಇದನ್ನು ನೋಡಿದ ಚಾಣಕ್ಯನು ಅವನ ನ್ಯಾಯಪ್ರಜ್ಙೆಯನ್ನು ಮೆಚ್ಚಿದನು. ಚಾಣಕ್ಯನು ಅವನ ತಾಯಿಯನ್ನು ಭೆಟ್ಟಿಯಾಗಿ ತಕ್ಷಶಿಲೆಯಲ್ಲಿ ಚಂದ್ರಗುಪ್ತನಿಗೆ ಶಿಕ್ಷಣ ಕೊಡಿಸಿದನು.

ಆ ಸುಮಾರಿಗೆ ತಕ್ಷಶಿಲೆಯ ಹತ್ತಿರದಲ್ಲೇ ಇದ್ದ ಅಲೆಕ್ಸಾಂಡರ್ ನನ್ನು ಚಂದ್ರಗುಪ್ತನು ಭೆಟ್ಟಿಯಾದನೆಂದೂ ಕೆಲವು ಉಲ್ಲೇಖಗಳಿವೆ. ಇದು ಕ್ರಿ.ಪೂ. ೩೨೬ ರ ಹೊತ್ತಿಗೆ ಆಗಿರಬಹುದು . ಹಾಗಿದ್ದಲ್ಲಿ ಚಂದ್ರಗುಪ್ತನ ಹುಟ್ಟು ಕ್ರಿ.ಪೂ. ೩೪೦ ರ ಸುಮಾರಿಗೆ ಎಂದು ತಿಳಿಯಬಹುದು.

ಕೆಳವರ್ಗದಿಂದ ಬಂದರೂ ಅವನು ಬುದ್ಧಿಬಲದಿಂದ ಪಟ್ಟವನ್ನೇರಲು ಪ್ರಯತ್ನಿಸುತ್ತಿದ್ದನು. ರಾಜ ನಂದನಿಗೆ ಕೋಪ ಬರಿಸಿ ಮರಣದಂಡನೆಗೆ ಗುರಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ಒಂದು ಸೈನ್ಯವೊಂದನ್ನು ಕಟ್ಟಿದನು ಎಂದೂ ಹೇಳುತ್ತಾರೆ.

Chandragupta Maurya Empire
ಚಂದ್ರಗುಪ್ತನ ದಕ್ಷಿಣದಿಕ್ಕಿನ ದಿಗ್ವಿಜಯಗಳ ನಂತರ ಕ್ರಿ.ಪೂ. ೩೦೦ ರ ಹೊತ್ತಿಗೆ ಮೌರ್ಯ ಸಾಮ್ರಾಜ್ಯದ ವಿಸ್ತಾರ.

ಮೌರ್ಯ ಸಾಮ್ರಾಜ್ಯದ ಸ್ಥಾಪನೆ: ಅಲೆಕ್ಸಾಂಡರ್ ನ ದಾಳಿಯ ಕಾಲಕ್ಕೆ ಚಾಣಕ್ಯನು ತಕ್ಷಶಿಲೆಯಲ್ಲಿದ್ದನು. ತಕ್ಷಶಿಲೆ ಮತ್ತು ಗಾಂಧಾರಗಳನ್ನು ಆಳುತ್ತಿದ್ದ ರಾಜ ಅಂಭಿಯು ಅಲೆಕ್ಸಾಂಡರನೊಂದಿಗೆ ಹೋರಾಟ ಮಾಡದೆ ಒಪ್ಪಂದ ಮಾಡಿಕೊಂಡನು. ಈ ದಾಳಿಯು ಭಾರತೀಯ ಸಂಸ್ಕೃತಿಯ ಮೇಲಿನ ದಾಳಿ ಎಂದು ಚಾಣಕ್ಯನು ಬಗೆದು ಉಳಿದ ರಾಜರನ್ನು ಒಟ್ಟಾಗಿ ಅಲೆಕ್ಸಾಂಡರನನ್ನು ಎದುರಿಸಲು ಕೇಳಿಕೊಂಡನು. ಪಂಜಾಬಿನ ರಾಜ ಪೋರಸ್ (ಪರ್ವತೇಶ್ವರ) ನೊಬ್ಬಾತನೇ ಅಲೆಕ್ಸಾಂಡರನನ್ನು ಎದುರಿಸಿದವನು ಆದರೆ ಸೋತು ಹೋದನು.

ಚಾಣಕ್ಯನು ಆನಂತರ ಮಗಧಕ್ಕೆ ಹೋಗಿ ಅಲ್ಲಿ ಪೂರ್ವದಲ್ಲಿ ಬಿಹಾರ,ಬಂಗಾಲಗಳಿಂದ ಪಶ್ಚಿಮದಲ್ಲಿ ಪಂಜಾಬ್ ವರೆಗೆ ವ್ಯಾಪಿಸಿದ್ದ ವಿಶಾಲವಾದ ನಂದ ಸಾಮ್ರಾಜ್ಯವನ್ನು ಆಳುತ್ತಿದ್ದ ಧನನಂದನ ಸಹಾಯ ಕೇಳಿದನು . ಆದರೆ ಧನನಂದನು ಸಹಾಯ ನಿರಾಕರಿಸಿದನು. ಈ ಘಟನೆಯ ನಂತರ ಚಾಣಕ್ಯನು , ಭಾರತೀಯ ಪ್ರದೇಶಗಳನ್ನು ವಿದೇಶೀಯರ ಆಕ್ರಮಣದಿಂದ ಕಾಪಾಡುವ ಒಂದು ಸಾಮ್ರಾಜ್ಯವನ್ನು ನಿರ್ಮಿಸುವ ಕನಸನ್ನು ತನ್ನ ಶಿಷ್ಯ ಚಂದ್ರಗುಪ್ತನಲ್ಲಿ ಬಿತ್ತತೊಡಗಿದನು.

ಚಾಣಕ್ಯ: ಚಾಣಕ್ಯನು ಕೌಟಿಲ್ಯ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗಿದ್ದಾನೆ . ಅವನು ಚಂದ್ರಗುಪ್ತನನ್ನು ಅಧಿಕಾರಕ್ಕೆ ತರುವಲ್ಲಿ ಅವನಿಗೆ ಮಾರ್ಗದರ್ಶನ ನೀಡಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ನಂತರ ಅವನ ಮಂತ್ರಿಯಾಗಿಯೂ ಕೆಲಸ ಮಾಡಿದನು . ಅವನು ‘ಅರ್ಥಶಾಸ್ತ್ರ’ ಎಂಬ ಕೃತಿಯನ್ನು ರಚಿಸಿದ್ದಾನೆ.

ನಂದ ಸಾಮ್ರಾಜ್ಯವನ್ನು ಗೆದ್ದುಕೊಂಡದ್ದು ಮತ್ತು ವಿಸ್ತರಿಸಿದ್ದು: ಕ್ರಿ.ಪೂ ೩೨೩ ರಲ್ಲಿ ಅಲೆಕ್ಸಾಂಡರನ ಮರಣದ ನಂತರ ಅವನ ಪ್ರತಿನಿಧಿಗಳ ಆಡಳಿತದಲ್ಲಿದ್ದ ವಾಯುವ್ಯ ಭಾರತದ ಪ್ರದೇಶಗಳನ್ನು ಚಂದ್ರಗುಪ್ತನು ಗೆದ್ದುಕೊಂಡನು. ಅವನು ಪರ್ವತಕ ಅಥವಾ ಪೋರಸ್ ನ ಜತೆಗೂಡಿದುದಾಗಿ ವಿಶಾಖದತ್ತನ ಮುದ್ರಾರಾಕ್ಷಸ ಮತ್ತಿತರ ಕೃತಿಗಳು ಹೇಳುತ್ತವೆ.

ನಂತರ ಅವನು ಕ್ರಿ.ಪೂ. ೩೨೧ರಲ್ಲಿ ಧನನಂದ ನ ಸೈನ್ಯದೊಂದಿಗೆ ಯುದ್ಧಗಳನ್ನು ಮಾಡಿ ಬಲಾಢ್ಯ ಮಗಧ ಸಾಮ್ರಾಜ್ಯವನ್ನು ಗೆದ್ದುಕೊಂಡನು. ಆಗ ವನಿಗೆ ೨೦ ವರ್ಷ ವಯಸ್ಸಾಗಿತ್ತು. ಅಷ್ಟು ಹೊತ್ತಿಗೆ ಅವನ ಸಾಮ್ರಾಜ್ಯವು ಸಿಂಧೂ ನದಿಯ ಕಣಿವೆಯಿಂದ ಆಸ್ಸಾಂ ಮತ್ತು ಬಂಗಾಲದವರೆಗೆ ಹಬ್ಬಿತ್ತು. ನಂತರ ಅವನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವತ್ತ ಗಮನ ಹರಿಸಿದನು.

ಅತ್ತ ಸೆಲ್ಯೂಕಸ್ ಎಂಬ ಅಲೆಕ್ಸಾಂಡರನ ಆಡಳಿತಾದಿಕಾರಿಯು ಅಲೆಕ್ಸಾಂಡರನ ಸಾಮ್ರಾಜ್ಯದ ಭಾಗಗಳನ್ನು ಮತ್ತೆ ವಶಪಡಿಸಿಕೊಳ್ಳುತ್ತ ಸಿಂಧೂ ನದಿಯತ್ತ ಬಂದಾಗ ಚಂದ್ರಗುಪ್ತನೊಂದಿಗೆ ಸೆಣಸಿ ಒಪ್ಪಂದವೊಂದನ್ನು ಮಾಡಿಕೊಳ್ಳಬೇಕಾಯಿತು . ಸಿಂಧೂ ನದಿಯ ಪಶ್ಚಿಮದಲ್ಲಿನ ವಿಶಾಲವಾದ ಪ್ರದೇಶಗಳು ಚಂದ್ರಗುಪ್ತನ ವಶವಾದವು. ಸೆಲ್ಯೂಕಸ್ ನು ಮೌರ್ಯರೊಂದಿಗೆ ವಿವಾಹ ಸಂಬಂಧವನ್ನು ಬೆಳೆಸಿದನು. ಅವನು ಮೌರ್ಯರ ರಾಜಧಾನಿ ಪಾಟಲೀಪುತ್ರ ( ಇದು ಇಂದಿನ ಬಿಹಾರದಲ್ಲಿರುವ ಪಾಟ್ನಾ ನಗರ ) ಯಲ್ಲಿನ ಆಸ್ಥಾನಕ್ಕೆ ಮೆಗಾಸ್ತನೀಸ್ ನನ್ನು ತನ್ನ ರಾಯಭಾರಿಯಾಗಿ ಕಳಿಸಿದನು .

ಸೆಲ್ಯೂಕಸ್ ನಿಂದ ಪೂರ್ವ ಪರ್ಶಿಯಾದ ಪ್ರಾಂತಗಳನ್ನು ತನ್ನದಾಗಿಸಿಕೊಂಡ ಚಂದ್ರಗುಪ್ತನು ವಿಂಧ್ಯಪರ್ವತಗಳಾಚೆ ದಕ್ಷಿಣಪ್ರಸ್ಥಭೂಮಿಯಲ್ಲಿ ತನ್ನ ಸಾಮ್ರಾಜ್ಯವನ್ನು ಬೆಳೆಸತೊಡಗಿದನು. ಅವನ ದಿಗ್ವಿಜಯಗಳ ಕೊನೆಯ ಹೊತ್ತಿಗೆ ದಕ್ಷಿಣ ಏಶಿಯಾದ ಬಹುಭಾಗ ಅವನ ಹಿಡಿತಕ್ಕೆ ಬಂದಿತ್ತು.

ಚಂದ್ರಗುಪ್ತನ ಕೊನೆಯ ದಿನಗಳು: ಚಂದ್ರಗುಪ್ತನು ತನ್ನ ಜೀವನದ ಕೊನೆಗಾಲದಲ್ಲಿ ಸಿಂಹಾಸನವನ್ನು ತ್ಯಜಿಸಿ ಜೈನಧರ್ಮಕ್ಕೆ ಸೇರಿ ಸಂನ್ಯಾಸಿಯಾಗಿ ಕರ್ನಾಟಕದಲ್ಲಿರುವ ಶ್ರವಣಬೆಳಗೊಳದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದನು ಎಂದು ನಂಬಲಾಗಿದೆ.

ಆಧಾರ: wikipedia

Review Overview

User Rating: 4.88 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *