‘ಕೆ.ಮಂಜುನಾಥಯ್ಯನವರು’, ಈಗ ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಿಂದಲ್ಲ. ಅವರದೇ ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಂಡು ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದಾರೆ. ಸ್ವತಃ ಇಂಜಿನಿಯರ್ ಆಗಿರುವ ಮಂಜುನಾಥಯ್ಯನವರು, ಮುಂಬೈನ, ‘ಬಿ.ಎ.ಆರ್.ಸಿ'(BARC) ಯಲ್ಲಿ ವಿಜ್ಞಾನಿಯಾಗಿ, ಹಲವು ವರ್ಷ ದುಡಿದು ಸ್ವಇಚ್ಛೆಯಿಂದ ನಿವೃತ್ತರಾದರು. ಮಂಜುನಾಥರಿಗೆ, ಭಾರತೀಯ ಸಾಹಿತ್ಯ,ಕಲೆ, ಸಂಸ್ಕೃತಿ, ನೃತ್ಯ ಮುಂತಾದವುಗಳಲ್ಲಿ ಅತೀವ ಆಸಕ್ತಿ. ಅದರಲ್ಲೂ ತಮ್ಮ ಮಾತೃಭಾಷೆ ಕನ್ನಡವನ್ನು ಪ್ರಾಣದಂತೆ ಪ್ರೀತಿಸುವವರು ಅವರು. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮ ಹಾಗೂ ಅತಿ ಮಹತ್ವದ ಯೋಗದಾನಮಾಡಿದ್ದಾರೆ. (ಅವರೊಬ್ಬ ಸಮರ್ಥ ನಟರು ಸಹಿತ).
‘ಮುಂಬೈ ನಾಟಕಗಳು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡವು’“: ‘ಮೈಸೂರ್ ಅಸೋಸಿಯೇಷನ್, ಮುಂಬೈ’ನ ‘ಹಿರಿಯ ಅಜೀವ ಸದಸ್ಯ’ರಾದ ಅವರು, ತಮ್ಮಂತೆ ಆಸಕ್ತರ ಗುಂಪೊಂದನ್ನು ಕಟ್ಟಿಕೊಂಡು ಕನ್ನಡ ರಂಗಮಂಚವನ್ನು ಸಂಮೃದ್ಧಿಗೊಳಿಸಲು ಇಂದಿಗೂ ಶ್ರಮಿಸುತ್ತಿದ್ದಾರೆ. ಹಲವು ಬಾರಿ,’ಮುಂಬೈನ ನಾಟಕ ತಂಡಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ ನಾಟಕವಾಡಿಸಿದರು.’ ಮುಂಬೈನಗರದಲ್ಲಿ ಜರುಗುವ ಮಹತ್ವದ ಕನ್ನಡ ಕಾರ್ಯಕ್ರಮಗಳಿಗೆ ಸಮಯ ಹೊಂದಿಸಿಕೊಂಡು ಬೆಂಗಳೂರಿನಿಂದ ಹೊರಟುಬರುವ, ಹಾಗೂ ಸಮಯಕ್ಕೆ ಮೊದಲೇ ಹಾಜರಿರುವ ಅಪರೂಪದ ಕನ್ನಡಪ್ರೇಮಿ, ನಿಷ್ಠಾವಂತ, ಸದಾ ಹಸನ್ಮುಖಿ, ಮಂಜುನಾಧರು.’ಮೈಸೂರ್ ಅಸೋಸಿಯೇಷನ್’ ಇದುವರೆವಿಗೆ ನಡೆದುಬಂದ ಹಾದಿಯಲ್ಲಿನ ಸೂಕ್ಷಾತಿಸೂಕ್ಷ್ಮ ವಿವರಗಳನ್ನು ಅಧಿಕೃತವಾಗಿಯೂ ಹಾಗೂ ಅಧಿಕಾರಯುತವಾಗಿಯೂ ಮಾಹಿತಿ ಒದಗಿಸಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅತಿ ಪ್ರಮುಖರು.
ಮೈಸೂರು ಅಸೋಸಿಯೇಷನ್ ನ ವಾರ್ಷಿಕ ದತ್ತಿ ಉಪನ್ಯಾಸಮಾಲೆ: ಮುಂಬೈವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ ವಾರ್ಷಿಕ ದತ್ತಿ ಉಪನ್ಯಾಸ ಮಾಲೆಯ ಆಹ್ವಾನಿತ ಭಾಷಣಕಾರರಾಗಿ ೨೦೧೩ ರಲ್ಲಿ ಡಾ.ಎಚ್ಚೆಸ್ವಿಯವರು ಬೆಂಗಳೂರಿನಿಂದ ಬಂದಿದ್ದರು. ಆ ಸಮಯದಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಿರೂಪಿಸಿದ ಶ್ರೇಯಸ್ಸು,ಶ್ರೀ.ಕೆ. ಮಂಜುನಾಥಯ್ಯ, ಡಾ.ಉಪಾಧ್ಯಾಯ, ಹಾಗೂ ಡಾ.ಬಿ.ಆರ್.ಮಂಜುನಾಥಯ್ಯನವರಿಗೆ ಸಲ್ಲುತ್ತದೆ.

ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ: ’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬೈನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.’ ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. ಜೂನ್ ೨ ರಂದು, ‘ಮಲ್ಲೇಶ್ವರದ ಸೇವಾಸದನ ಸಭಾಂಗಣ’ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. ಜೂನ್ ೩ ರಂದು ‘ಎಚ್.ಎನ್.ಕಲಾಕ್ಷೇತ್ರ’ದಲ್ಲಿ ‘ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ ‘ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು ‘ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಪ್ರಾಯೋಜಿಸಿತ್ತು. ಈ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ರಂಗಸಜ್ಜಿಕೆ, ಬೆಳಕು,ನೇಪಥ್ಯದ ನೆರವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು,ಡಾ.ಬಿ.ಆರ್.ಮಂಜುನಾಥ್. ಶ್ರೀ.ಕೆ.ಮಂಜುನಾಥಯ್ಯ ಹಾಗೂ ಮತ್ತಿತರ ಸಹ-ಕಲಾವಿದರು ಈ ನಾಟಕಗಳಲ್ಲಿ ಪಾತ್ರವಹಿಸಿ ಅವುಗಳ ಯಶಸ್ಸಿಗೆ ಕಾರಣರಾದರು. ಮಂಜುನಾಥಯ್ಯನವರು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ನೇರವಾಗಿ ಇಲ್ಲವೇ ಕಣ್ಣಿಗೆ ಬೀಳದಂತೆಯೂ, ಎಲ್ಲ ಸ್ಥರಗಳಲ್ಲೂ ತಮ್ಮಯೋಗದಾನ ಮಾಡಿರುತ್ತಾರೆ.