ಕೆ.ಎಸ್.ಹಡಪದ (೩೦.೦೪.೧೯೩೨ – ೨೭.೧೦.೨೦೦೬): ತಬಲ ವಾದನದ ಮಾಂತ್ರಿಕರೆನಿಸಿದ್ದ ಕರವೀರಪ್ಪ ಶಿವಪ್ಪ ಹರಪದ ರವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ. ಸಂಗೀತ ಪರಂಪರೆಯ ಮನೆತನ. ಅಜ್ಜ ಚರ್ಮ ವಾದ್ಯ ನಿಪುಣರು, ತಂದೆ ಶಿವಪ್ಪ ಕರಡಿ ಮಜಲು ನುಡಿಸುವುದರಲ್ಲಿ ಪ್ರಖ್ಯಾತರು.
[sociallocker]ತಬಲ ನುಡಿಸುವುದೆಂದರೆ ಬಾಲಕನಾಗಿದ್ದ ಹಡಪದರಿಗೆ ಸಂತಸದ ವಿಷಯ. ಸ್ಕೂಲಿಗೆ ಚಕ್ಕರ್ ಹೊಡೆದು ತಬಲ ನುಡಿಸುವುದನ್ನು ಕಂಡು, ತಬಲ ಕಲಿಕೆಗಾಗಿ ಸೇರಿಸಿದ್ದು ಗದಗಿನ ವೀರೇಶ್ವರ ಪುಣ್ಯಾಶ್ರಮ. ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಹತ್ತು ವರ್ಷಕ್ಕೂ ಮಿಕ್ಕು ತಬಲ ಕಲಿಕೆ. ತಬಲದಲ್ಲಿ ಉನ್ನತ ಶಿಕ್ಷಣ ಪಡೆಯಲು ಸ್ನೇಹಿತ ಯಲ್ಲಪ್ಪನೊಡನೆ ತಲುಪಿದ್ದು ವಾರಣಾಸಿ. ಯಲ್ಲಪ್ಪನವರು ಉಸ್ತಾದ್ ಬಿಸ್ಮಿಲ್ಲಾಖಾನ್ರ ಬಳಿ ಶಹನಾಯ್ ವಾದ್ಯ ಶಿಕ್ಷಣ ಪಡೆದರೆ ಹಡಪದರವರು ಪಂ. ಅನೋಖೆಲಾಲ್ ಮಿಶ್ರಾರವರಲ್ಲಿ ಕಲಿತದ್ದು ತಬಲ ಉಚ್ಚ ಶಿಕ್ಷಣ. ಹದಿನಾಲ್ಕು ವರ್ಷಗಳ ನಿರಂತರ ಕಲಿಕೆ. ಬಾಗಲಕೋಟೆಗೆ ಮರಳಿದ ಪ್ರಬುದ್ಧ ತಬಲ ಪಟುವಿಗೆ ಭಾರತದ ಗಾಂಧರ್ವ ಮಹಾ ವಿದ್ಯಾಲಯದಿಂದ ದೊರೆತದ್ದು ಸಂಗೀತ ಅಲಂಕಾರ ಪದವಿ.ಆಸಕ್ತರಿಗೆ ತಬಲ ವಿದ್ಯೆ ಕಲಿಸಲು ಬಾಗಲಕೋಟೆಯಲ್ಲಿ ತೆರೆದದ್ದು ನಟರಾಜ ಸಂಗೀತ ವಿದ್ಯಾಲಯ. ಬಾಗಲಕೋಟೆ, ಗದಗಿನ ವಿಜಯ ಕಲಾ ಮಂದಿರದಲ್ಲಿ ಶಿಕ್ಷಕರಾಗಿ ಸಲ್ಲಿಸಿದ ಸೇವೆ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಪ್ರಭಾ ಅತ್ರೆ, ಸಿದ್ಧರಾಮ ಜಂಬಲ ದಿನ್ನಿ, ಬಾಲೇಖಾನ್, ಲಕ್ಷ್ಮೀಶಂಕರ್, ಪ್ರಭುದೇವ ಸರ್ದಾರ, ಬಿ.ಡಿ.ಪಾಠಕ್, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಮುಂತಾದವರ ಸಂಗೀತ ಕಾರ್ಯಕ್ರಮಗಳಿಗೆ ನೀಡದ ತಬಲ ಸಾಥಿ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲೂ ಭಾಗಿ. ಪಾರ್ವತೀಕರರವರ ವೀಣಾವಾದನ, ನರಸಿಂಹಲು ವಡವಾಟಿಯವರ ಕ್ಲಾರಿಯೊನೆಟ್ ಗೆ ಸಾಥಿಯಾಗಿ ದೇಶದ ಹೆಸರಾಂತ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ.
ಧಾರವಾಡ, ಗುಲಬರ್ಗಾ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯರಾಗಿ, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಸಲ್ಲಿಸಿದ ಸೇವೆ. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕಲಾ ತಿಲಕ, ನಾದಯೋಗಿ, ತಬಲವಾದನ ಪ್ರವೀಣ, ತಾಳ ಮಾರ್ತಾಂಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.