ಕೆರೂರು ವಾಸುದೇವಾಚಾರ್ಯ (೧೫-೧೦-೧೮೬೬ – ೧೧-೧-೧೯೨೧): ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ (೧೯೦೮) ಕರ್ತೃಕೆರೂರು ವಾಸುದೇವಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಶ್ರೀನಿವಾಸಾಚಾರ್ಯರು, ತಾಯಿ ಪದ್ಮಾವತೀಬಾಯಿ. ಪ್ರಾರಂಭಿಕ ಶಿಕ್ಷಣ-ಸಂಸ್ಕೃತಾಭ್ಯಾಸ ಮನೆಯಲ್ಲಿಯೇ. ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದಲ್ಲಿ.
೧೮೮೪ರಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಪ್ರೌಢವ್ಯಾಸಂಗಕ್ಕಾಗಿ ಸೇರಿದ್ದು ಪುಣೆಯ ಫರ್ಗುಸನ್ ಕಾಲೇಜು. ಅನನುಕೂಲತೆಯಿಂದ ವಿದ್ಯಾಭ್ಯಾಸಕ್ಕೆ ಅಡಚಣೆ. ಖಾಸಗಿಯಾಗಿ ವ್ಯಾಸಂಗ ಮಾಡಿ ಎಚ್.ಪಿ. ಪರೀಕ್ಷೆಯಲ್ಲಿ ತೇರ್ಗಡೆ. ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡಿ ವಕೀಲಿ ವೃತ್ತಿ ಪ್ರಾರಂಭ.
ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ. ಅದೇ ಕಾಲದಲ್ಲಿ ರಚಿಸಿದ ಸಾಮಾಜಿಕ ಕಾದಂಬರಿ ‘ಇಂದಿರೆ.’ ಬಾಲ್ಯವಿವಾಹ, ವಿಧವಾ ವಿವಾಹ, ಆಧುನಿಕ ಶಿಕ್ಷಣ ಹೊಂದಿದ ಸುಧಾರಕ ಮನೋವೃತ್ತಿಯ ಯುವಕ-ಯುವತಿಯರು ಮುಂತಾದ ಸಂಗತಿಗಳಿಂದ ಕೂಡಿದ ಕಾದಂಬರಿ ವಸ್ತು. ವಿಚಾರ ಪೂರ್ಣ ಸಂವೇದನಾಶೀಲತೆಯನ್ನು ಕಾದಂಬರಿಯಲ್ಲಿ ತರುವುದೇ ಇವರ ಪ್ರಮುಖ ಉದ್ದೇಶ. ಹಾಸ್ಯವನ್ನು ಬೆರೆಸಿ ಕಥೆಯ ಆಕರ್ಷಣೆಯನ್ನು ಹೆಚ್ಚಿಸುವುದು ಕೆರೂರರ ಅಭಿವ್ಯಕ್ತಿಯ ವೈಶಿಷ್ಟ . ನಂತರ ರಚಿಸಿದ ಕಾದಂಬರಿಗಳು-ಯದು ಮಹಾರಾಜ, ಭಾತೃಘಾತಕ ಔರಂಗಜೇಬ, ವಾಲ್ಮೀಕಿ ವಿಜಯ, ಯವನ ಸೈರಂ ಎಂಬ ಐದು ಕಾದಂಬರಿಗಳು. ಕಥಾಸಂಗ್ರಹಗಳು-ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು. ನಾಟಕಗಳು-ವಸಂತ ಯಾಮಿನಿ (ಷೇಕ್ಸ್ಪಿಯರನ ಮಿಡ್ ಸಮರ್ ನೈಟ್ಸ್ಡ್ರೀಮ್), ಸುರತ ನಗರದ ಶ್ರೇಷ್ಠಿ (ಮರ್ಚೆಂಟ್ ಆಫ್ ವೆನಿಸ್) ಮತ್ತು ಆಲಿವರ್ ಗೋಲ್ಡ್ ಸ್ಮಿತ್ನ ‘ಷಿ ಸ್ಟೂಪ್ಸ್ ಟು ಕಾನಕರ್’ ಎಂಬ ನಾಟಕವನ್ನು ‘ವಶೀಕರಣ’ ಎಂಬ ಹೆಸರಿನಿಂದ ಅನುವಾದ.
ಉತ್ತರ ಕರ್ನಾಟಕದ ಇತರ ಬರಹಗಾರರು ಜಾನಪದ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಟ್ಟಾಗ ವಾಸುದೇವಾಚಾರ್ಯರು ರಚಿಸಿದ್ದು ಸಾಮಾಜಿಕ ಸಾಹಿತ್ಯ. ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘದವರು ೧೯೬೪ರಲ್ಲಿ ಪ್ರಕಟಿಸಿದ ಸ್ಮಾರಕ ಸಂಪುಟ ‘ವಾಸುದೇವ ಪ್ರಶಸ್ತಿ.’
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.