ಒಂದು ಊರಿನಲ್ಲಿ ಸುರೇಶ – ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು ಆ ತೋಟದಲ್ಲಿ ಅವರು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಮಗು ಇದ್ದಳು ಅವಳ ಹೆಸರು ಸವಿತಾ . ಸುರೇಶ – ಸುಧಾ ಅವರದ್ದು ಚಿಕ್ಕ ಕುಟುಂಬವಾಗಿತ್ತು. ಅವರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ, ಆಕಳು, ಎಮ್ಮೆ ಇನ್ನಿತರೆ ಸಾಕು ಪ್ರಾಣಿಗಳನ್ನು ಸಾಕಿದ್ದರು. ಇದರಿಂದಾಗಿ ಸವಿತಾಗೆ ಪ್ರಾಣಿ – ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ. ಅವಳು ಆ ಪ್ರಾಣಿ – ಪಕ್ಷಿಗಳೊಂದಿಗೆ ಪ್ರೀತಿಯಿಂದ ಆಟವಾಡುತ್ತಿದ್ದಳು. ಸವಿತಾ ದೊಡ್ಡವಳಾಗಿ ಶಾಲೆಗೆ ಹೋಗಲಾರಂಭಿಸಿದಳು.
ಒಂದು ದಿನ ನವಿಲೊಂದು ಯಾವುದೋ ಒಂದು ಕಾಡಿನ ಬೇಟೆಗಾರನಿಂದ ತಪ್ಪಿಸಿಕೊಂಡು ಮೈಮೇಲೆ ರಕ್ತ ಹರಿಸಿಕೊಂಡು ನಡುಗುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಸವಿತಾ ಶಾಲೆಯಿಂದ ಮನೆಗೆ ಮರಳುತ್ತಿರುವಾಗ ಇದನ್ನು ನೋಡಿದಳು. ಆಗ ಸವಿತಾಳಿಗೆ ಅದರ ಮೇಲೆ ಕರುಣೆ ಉಂಟಾಗಿ ಅದನ್ನು ಹಿಡಿದುಕೊಂಡು ತನ್ನ ಮನೆಗೆ ತಂದಳು. ಸವಿತಾಳ ಅಮ್ಮ ಸುಧಾ ಅದನ್ನು ನೋಡಿ “ಒಳ್ಳೆಯದನ್ನೇ ಮಾಡಿರುವೆ ಮಗು. ಇಲ್ಲವಾದರೆ ಈ ಪಕ್ಷಿಯು ಸತ್ತು ಹೋಗುತ್ತಿತ್ತು” ಎಂದಳು.
ಅವರು ಗಾಯಗೊಂಡ ನವಿಲಿಗೆ ಔಷಧಿ ಹಚ್ಚಬೇಕೆಂದು ಸೊಪ್ಪನ್ನು ತಂದು ಕುಟ್ಟಿ ಅದರ ಮೇಲೆ ಲೋಪ ಮಾಡಿ ಆ ನವಿಲಿನ ಗಾಯಕ್ಕೆ ಸವರಿದಳು. ಸಾಯಂಕಾಲ ಅದಕ್ಕೆ ತಿನ್ನಲು ತುಪ್ಪದ ಅನ್ನವನ್ನು ಕೊಟ್ಟಳು. ಅದನ್ನು ತಿಂದ ನವಿಲು ಆ ರಾತ್ರಿ ವಿಶ್ರಾಂತಿ ಪಡೆಯಿತು.. ಒಂದೆರಡು ದಿನಗಳು ಕಾಲ ಅವರಮನೆಯಲ್ಲಿ ಇಟ್ಟುಕೊಂಡು. ಅದು ಗಾಯವನ್ನು ಚೇತರಿಸಿಕೊಂಡು ಆದಮೇಲೆ ಅದನ್ನು ಎತ್ತಿಕೊಂಡು ಹೋಗಿ ನವಿಲಿನ ಗುಂಪಿನಲ್ಲಿ ಸವಿತಾ ಅದನ್ನು ಬಿಟ್ಟು ಬಂದಳು. ಆಗ ಆ ನವಿಲು ಬಹಳ ಹೊತ್ತು ಪ್ರೀತಿಯಿಂದ ಪುಟ್ಟಿಯನ್ನೇ ನೋಡುತ್ತಿತ್ತು.
ಕೆಲವು ದಿನಗಳ ನಂತರ ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಸವಿತಾ ಅಂದು ಹಾವೊಂದನ್ನು ಕಾಣದೆ ಅದನ್ನು ತುಳಿದುಬಿಟ್ಟಳು. ಆಗ ಅವಳು ಗಾಬರಿಯಿಂದ ಓಡತೊಡಗಿದಳು. ಆ ಹಾವು ಸಹ ಅವಳನ್ನು ಹಿಂಬಾಲಿಸ ತೊಡಗಿತು. ಆಗ ಅದೇ ಸಮಯಕ್ಕೆ ಇವಳಿಂದ ಉಪಕಾರ ಪಡೆದ ನವಿಲು ಈ ದೃಶ್ಯವನ್ನು ನೋಡಿತು. ತನ್ನನ್ನು ಕಾಪಾಡಿದ ಸವಿತಾಗೆ ಇಂತಹ ಸಂಕಟವೂ ಬಂದಿದೆಯಲ್ಲ. ಅವರು ನನಗೆ ಮಾಡಿದ ಈ ಉಪಕಾರವನ್ನು ನಾನು ಅವರಿಗೆ ಪ್ರತಿಉಪಕಾರವಾಗಿ ತೀರಿಸಬೇಕೆಂದು ನವಿಲು ಸರ್ರನೆ ಅಲ್ಲಿಗೆ ಬಂದಿತು. ಆ ಹಾವಿನ ಕಣ್ಣುಗಳನ್ನು ತನ್ನ ಕೊಕ್ಕಿನಿಂದ ಕುಕ್ಕಿತು. ಇದಾದ ನಂತರ ಸವಿತಾಳನ್ನೇ ನೋಡುತ್ತ ನಿಂತಿಕೊಂಡಿತು. ಸವಿತಾ ನವಿಲನ್ನು ಅಪ್ಪಿಕೊಂಡು ಮುದ್ದಾಡಿದಳು. ನಂತರ ನವಿಲು ಹಾರಿ ಹೋಗಿ ತನ್ನ ಬಳಗವನ್ನು ಸೇರಿಕೊಂಡಿತು.
ನೀತಿ
ಉಪಕಾರ ಮಾಡಿದವರಿಗೆ ಪ್ರತಿಉಪಕಾರ ಮಾಡಬೇಕು.
ಮನುಷ್ಯರಾದ ನಾವು ಒಬ್ಬರು ಮಾಡಿದ ಉಪಕಾರವನ್ನು ಬೇಗ ಮರೆತುಬಿಡುತ್ತೇವೆ. ಆದರೆ ಮೂಕಗಳಾದ ಪ್ರಾಣಿ-ಪಕ್ಷಿಗಳು ನಾವು ಮಾಡಿದ ಉಪಕಾರವನ್ನು ನೆನಪಿನಲ್ಲಿಟ್ಟುಕೊಂಡು ನಮಗೆ ಪ್ರತಿಉಪಕಾರವಾಗಿ ನಮಗೆ ಸಹಾಯ ಮಾಡುತ್ತವೆ.