ಎ.ವಿ. ಪ್ರಕಾಶ್ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, ತಾಯಿ ಶಂಕರಮ್ಮ. ತಂದೆಯಿಂದಲೇ ಸಂಗೀತದ ಮೊದಲ ಪಾಠ. ಟಿ.ಆರ್. ಕೃಷ್ಣಮೂರ್ತಿ, ಸಿ.ಎಂ. ಮಧುರಾನಾಥ್, ಎಂ.ಆರ್.ಕೃಷ್ಣ, ಪ್ರೊ.ರಾ. ವಿಶ್ವೇಶ್ವರನ್, ಡಾ. ಎನ್. ರಮಣಿ ಮುಂತಾದವರ ಬಳಿ ಕೊಳಲಿನ ಶಿಕ್ಷಣ.
ಐದು ದಶಕಗಳಿಂದಲೂ ನಾಡಿನಾದ್ಯಂತ ನಡೆಸಿಕೊಡುತ್ತಿರುವ ಕೊಳಲುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ಶ್ರೀಕೃಷ್ಣ ಗಾನಸಭಾ ಅಲ್ಲದೇ ಮೈಲಾಪುರ್, ಪೂನಾ, ಹೈದರಾಬಾದ್, ಶೃಂಗೇರಿ ಸಂಗೀತೋತ್ಸವ, ಸಾರ್ಕ್ಸಮ್ಮೇಳನ, ಮೈಸೂರು ದಸರಾ ಮಹೋತ್ಸವದ ದರಬಾರ್ ಹಾಲ್ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು.
ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕೊಳಲು ವಾದನದ ಪ್ರಾತ್ಯಕ್ಷಿಕೆ ಮತ್ತು ಕಚೇರಿ. ಶ್ರವಣ ಬೆಳಗೊಳದ ಮಹಾಮಸ್ತಕಾಬಿಷೇಕ ಸಂದರ್ಭದಲ್ಲಿ ಭರತ, ಬಾಹುಬಲಿ ಬಾಲ್ಯಲೀಲೋತ್ಸವ ಮುಂತಾದ ನೃತ್ಯರೂಪಕಗಳಿಗೆ ಸಂಗೀತ ಸಂಯೋಜನೆ, ಹಲವಾರು ಧ್ವನಿ ಸುರುಳಿಗಳ ಬಿಡುಗಡೆ.
ಮದರಾಸಿನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯ ದಕ್ಷಿಣವಲಯ ಸಂಗೀತೋತ್ಸವದಲ್ಲಿ ’ವರ್ಷದ ಉತ್ತಮ ಕೊಳಲುವಾದಕ’, ಬೆಂಗಳೂರಿನ ಗಾಯನಸಮಾಜದಿಂದ ’ವರ್ಷದ ಕಲಾವಿದ’, ಬೆಂಗಳೂರಿನ ನಾದ ಜ್ಯೋತಿ ತ್ಯಾಗರಾಜ ಭಜನ ಸಭಾದಿಂದ ಕಲಾಜ್ಯೋತಿ, ಮೈಸೂರು ಸುತ್ತೂರು ಮಠಾಧೀಶರಿಂದ, ಶೃಂಗೇರಿ ಜಗದ್ಗುರುಗಳಿಂದ ಸನ್ಮಾನ – ಕರ್ನಾಟಕ ಸಂಗೀತನೃತ್ಯ ಅಕಾಡಮಿಯಿಂದ ವಾರ್ಷಿಕ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.