ಎಸ್.ಕೆ. ನಾಡಿಗ್ (೦೬.೦೫.೧೯೨೮): ವ್ಯಂಗ್ಯಚಿತ್ರದ ಮೂಲಕ ಹಾಸ್ಯದ ಹೊನಲನ್ನು ಹರಿಸುತ್ತಿರುವ ನಾಡಿಗ್ರವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ತಂದೆ ಕೃಷ್ಣ ಸ್ವಾಮಿರಾವ್ ನಾಡಿಗ್, ತಾಯಿ ರಾಧಮ್ಮ, ಓದಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಪದವಿಗಾಗಿ.
ಚಿಕ್ಕಂದಿನಿಂದಲೂ ಗೆರೆಗಳೊಡನೆ ಚೆಲ್ಲಾಟ, ತೋಚಿದ್ದು-ಗೀಚಿದ್ದು. ಕೊರವಂಜಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಆರ್.ಕೆ. ಲಕ್ಷ್ಮಣ್ರವರ ವ್ಯಂಗ್ಯ ಚಿತ್ರಗಳನ್ನ ನೋಡಿ ತಾನೂ ಏಕೆ ಬರೆಯಬಾರದೆಂಬ ಆಲೋಚನೆ. ೧೯೪೭ರಲ್ಲಿ ಮೊದಲ ವ್ಯಂಗ್ಯಚಿತ್ರ ಆಂಗ್ಲ ಪತ್ರಿಕೆ ಮಿನಿ ಮ್ಯಾಗ್ ನಲ್ಲಿ ಪ್ರಕಟಿತ. ಇದುವರೆವಿಗೂ ಬರೆದ ವ್ಯಂಗ್ಯ ಚಿತ್ರಗಳ ಸಂಖ್ಯೆ ಸುಮಾರು ೨೦ ಸಾವಿರಕ್ಕೂ ಹೆಚ್ಚು.
[sociallocker]ಕೊರವಂಜಿ, ಪ್ರಜಾವಾಣಿ, ಜನಪ್ರಗತಿ, ಶಂಕರ್ಸ್ ವೀಕ್ಲಿ, ಕ್ಯಾರವಾನ್ಗಳಿಗೂ ವ್ಯಂಗ್ಯ ಚಿತ್ರ ರಚನೆ. ಎಂ.ಎಸ್. ಭರದ್ವಾಜ್ರವರ ಚಿತ್ರಗುಪ್ತ ಪತ್ರಿಕೆಯಲ್ಲಿ ದೊರೆತ ಫ್ರೊಫ್ರೀಡರ್ ಹುದ್ದೆ. ವಿನೋದ, ವಿಹಾರ ಅಂಕಣಬರಹಗಾರರಾಗಿಯೂ ಮುಂದುವರೆದ ಬರವಣಿಗೆ. ಕೆಲಕಾಲ ಉದಯವಾಣಿಯಲ್ಲಿ ಏನಂತೀರಿ? ಕಾಲಂ ಬರಹಗಾರರು. ಚಿತ್ರಗುಪ್ತ ಪತ್ರಿಕೆಯಲ್ಲಿ ಉಪಸಂಪಾದಕರ ಹುದ್ದೆ ಕೆಲ ಕಾಲ. ಟಿ. ಎಸ್ಸಾರ್, ಪೈ. ಎಸ್. ಕೆ. ರವರುಗಳಿಂದ ದೊರೆತ ಪ್ರೋತ್ಸಾಹ. ಬಣ್ಣದ ಚಿಟ್ಟೆ ಮೊದಲ ಕೃತಿ, ತಾಯಿನಾಡು ಪತ್ರಿಕೆಯ ಹೆಬ್ಬೂರು ರಂಗ ಸ್ವಾಮಿಯಿಂದ ಪ್ರಕಟಿತ. ಬೆಂಗಳೂರು ಬಿಟ್ಟು ಮೈಸೂರು ಕಾಗದದ ಕಾರ್ಖಾನೆಯಲ್ಲಿ ದೊರೆತ ನೌಕರಿಯಿಂದ ವ್ಯಂಗ್ಯಚಿತ್ರ ರಚನೆಗೆ ದೊರೆತ ವಿಪುಲ ಸಮಯ.ಮನೆ, ಮಕ್ಕಳು -ನೆರೆಹೊರೆ- ರಾಜಕಾರಣಿಗಳ ಸೋಗಲಾಡಿತನ, ಸಮಾಜವನ್ನು ಆವರಿಸಿರುವ ಭ್ರಷ್ಟಾಚಾರ ಹೀಗೆ ಬರೆದ ವೈವಿಧ್ಯಮಯ ವಿಷಯಗಳ ವ್ಯಂಗ್ಯಚಿತ್ರಗಳು. ವ್ಯಂಗ್ಯಚಿತ್ರಗಳ ಜೊತೆಗೆ ಬರೆದ ನಗೆ ಲೇಖನಗಳು. ೧೯೫೪ ರಿಂದ ೫೭ರ ಅವಧಿಯಲ್ಲಿ ಬಣ್ಣದ ಚಿಟ್ಟೆ, ಕನಸಿನೊಳಗೊಂದು ಕನಸು, ಕನ್ನಯ್ಯರಾಮ ಕಾದಂಬರಿಗಳ ರಚನೆ, ಕನ್ನಯ್ಯರಾಮ ’ಕನ್ನೇಶ್ವರರಾಮ’ ನಾಗಿ ಬಿಡುಗಡೆಯಾದ ಚಲನಚಿತ್ರ. ಕಳ್ಳರು ಕಳ್ಳರು, ಜುಗ್ಗ, ನೀಲಿಕವರ್, ಯಾರೋ ಬಂದರು ನಗೆಲೇಖನ ಚಿತ್ರೀಕರಣಗೊಂದು ಬೆಂಗಳೂರು ದೂರದರ್ಶನದಿಂದ ಪ್ರಸಾರ. ಸುಪ್ರಭಾತ ಟಿ.ವಿ. ಚಾನೆಲ್ನಲ್ಲಿ ’ನಾಡಿಗರ ನಾಡಿನಲ್ಲಿ’ ವ್ಯಂಗ್ಯಚಿತ್ರ ಪ್ರಸಾರ. ೧೯೭೭ ರಲ್ಲಿ ವ್ಯಂಗ್ಯಚಿತ್ರ ರಚನಕಾರರ ಸಂಘ ಸ್ಥಾಪನೆ. ಮಣಿಪಾಲದ ಶಿಲ್ಪಿ ಟಿ.ಎಂ.ಎ. ಪೈ ರವರ ಅಧ್ಯಕ್ಷತೆಯಲ್ಲಿ ಪ್ರಥಮ ವ್ಯಂಗ್ಯ ಚಿತ್ರಕಾರರ ಸಮ್ಮೇಳನ ನಡೆಸಿ ಹಿರಿಯ ವ್ಯಂಗ್ಯ ಚಿತ್ರಕಾರರನ್ನು ಸನ್ಮಾನಿಸಿದ ಕೀರ್ತಿ. ಮಾರಿಯೊ ಮಿರಾಂಡ, ಯೇಸುದ್ದೀನ್, ಫಡ್ನೀಸ್, ಬಾಪು, ಗೋಪುಲು, ಪ್ರಾಣ್ ಮುಂತಾದ ರಾಷ್ಟ್ರಖ್ಯತಿಯ ವ್ಯಂಗ್ಯಚಿತ್ರ ಕಾರರೊಡನೆ ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿಯನ್ನು ಮಾಜಿ ಮು. ಮ. ಎಸ್.ಎಂ.ಕೃಷ್ಣರವರಿಂದ ಪಡೆದವರು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.