HG Dattatreya

ಎಚ್. ಜಿ. ದತ್ತಾತ್ರೇಯ

ಎಚ್. ಜಿ. ದತ್ತಾತ್ರೇಯ (೨೦.೦೪.೧೯೪೨) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ನಟರಾಗಿ ಮಹಾನ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದವರಾಗಿದ್ದಾರೆ.

ಜೀವನ: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ ೨೦, ೧೯೪೨ರಂದು ಚಿತ್ರದುರ್ಗದಲ್ಲಿ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಅವಿವಾಹಿತರಾಗಿ ತಮ್ಮ ಕಾಯಕ ಮತ್ತು ಕಲೆಯನ್ನು ಗಂಭೀರವಾಗಿ ಸ್ವೀಕರಿಸಿದವರು.

ಚಿಕ್ಕಂದಿನಿಂದ ನಾಟಕದ ಗೀಳು: ಮಾಧ್ಯಮಿಕ ಶಾಲೆಯಿಂದಲೇ ದತ್ತಣ್ಣನವರಿಗೆ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ ಅವರಿಗೆ ಪ್ರಖ್ಯಾತಿ ತಂದಿತ್ತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಅವರದ್ದು ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ ಅವರ ಮೇಲಿತ್ತು. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ‘ಡನ್‌ಲಪ್ ಗರ್ಲ್’ನಲ್ಲೂ ಅವರದು ಹೆಣ್ಣು ಪಾತ್ರ. ಹೀಗೆ ಮೊದ ಮೊದಲು ಅವರಿಗೆ ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್‌ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಸಹಾ ಅಂಬಾಸಿಡರ್‌ ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆ ಪಡೆದರು.

ಹವ್ಯಾಸಿ ರಂಗಭೂಮಿಯಲ್ಲಿ ಪ್ರಖ್ಯಾತಿ: ದೆಹಲಿಯ ಕನ್ನಡ ಭಾರತಿ ಸಂಸ್ಥೆಯಲ್ಲಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ಮುಂತಾದ ನಾಟಕಗಳಲ್ಲಿ ದತ್ತಣ್ಣ ನಟಿಸಿದ್ದರು. ‘ನಾನೇ ಬಿಜ್ಜಳ’ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಅದು ಹಲವು ಬಾರಿ ಮರು ಪ್ರದರ್ಶನಗೊಂಡ ನಾಟಕ. ಎಂ.ಎಸ್.ಸತ್ಯು ರವರ ’ಕುರಿ’ನಾಟಕಕ್ಕೆ ನೇಪಥ್ಯದಲ್ಲಿ ದತ್ತಣ್ಣನವರದು ಪ್ರಮುಖಪಾತ್ರ.

ಬೆಂಗಳೂರಿನಲ್ಲಿ ಸುಧೀಂದ್ರರವರ ‘ಮಳೆ ನಿಲ್ಲುವವರೆಗೂ’, ಸಮುದಾಯದ ‘ಕೊಂದುಕೂಗಿತ್ತು ನೋಡಾ’, ‘ಸಂಕ್ರಾಂತಿ’, ‘ರುಡಾಲಿ’, ‘ಈ ಮುಖದವರು’, ‘ಪುರುಷ್’, ‘ಹಾವು ಏಣಿ’, ‘ರಕ್ತ ಕಲ್ಯಾಣ್’, ‘ನೆರಳು’, ‘ಸಿಂ’ಗಾರವ್ವ ಮತ್ತು ಅರಮನೆ’. ‘ಕುರುಕ್ಷೇತ್ರದಿಂದ ಕಾರ್ಗಿಲ್’ವರೆಗೆ ಹೀಗೆ ಹಲವಾರು ನಾಟಕಗಳಲ್ಲಿನ ಪ್ರಮುಖ ಪಾತ್ರದಿಂದ ದತ್ತಣ್ಣ ಪ್ರಸಿದ್ಧಿ ಪಡೆದರು.

ಚಲನಚಿತ್ರ ಕ್ಷೇತ್ರಕ್ಕೆ ತಡವಾದ ಆಗಮನ: ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ 45 ವರ್ಷ ತುಂಬಿದ ಮೇಲೆ. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಭಾರತದ ಇತರ ನಗರಗಳಾದ ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದೆಡೆ ಇದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್.ಎ.ಎಲ್‌ಗೆ ವರ್ಗವಾಗಿ ಬಂದರು. ಟಿ.ಎಸ್‌. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್‌’ ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಚಿತ್ರ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟರು. ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ.

ಮಹತ್ವದ ಪಾತ್ರಗಳು: ದತ್ತಣ್ಣನವರು ಅತ್ಯಂತ ವ್ಯಾಪಕವಾಗಿ ಕನ್ನಡಿಗರ ಮನ ಸೆಳೆದದ್ದು ‘ಮಾಯಾ ಮೃಗ’ ಧಾರಾವಾಹಿಯ ಶಾಸ್ತ್ರಿಗಳಾಗಿ. ಈಗಲೂ ದತ್ತಣ್ಣನವರೆಂದರೆ ಮನಸ್ಸಿಗೆ ಅತ್ಯಂತ ಆಪ್ತವಾಗಿ ನಿಲ್ಲುವ ಪಾತ್ರವದು. ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುವ ಅಪ್ಪಟ ಕಲಾವಿದರು ದತ್ತಣ್ಣ. ‘ಆಸ್ಫೋಟ’ದ ಖಳ, ‘ಅತಿಥಿ’ಯ ಅಸಹಾಯಕ ವೈದ್ಯ, ‘ಮುನ್ನುಡಿ’ಯ ಹುಡುಗಿ ಹುಡುಕ, ‘ಉಲ್ಟಾ ಪಲ್ಟಾ’ದ ತಲೆ ಚಚ್ಚಿಕೊಳ್ಳುವ ಇನ್ಸ್‌ಪೆಕ್ಟರು…,, ‘ಮುಸ್ಸಂಜೆ’ಯ ಶೇಷಣ್ಣ, ‘ರಾಮಾ ಶಾಮಾ ಭಾಮಾ’ದ ರಮೇಶನ ತಂದೆ, ‘ಬೆಟ್ಟದ ಜೀವ’ದ ಗೋಪಾಲಯ್ಯ ಮತ್ತು ಇತ್ತೀಚೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿಗಳಲ್ಲಿ ವಿಶೇಷ ಗೌರವ ತಂದ ಭಾರತ್ ಸ್ಟೋರ್ಸ್ ಚಿತ್ರದಲ್ಲಿ ಅಂಗಡಿಯ ಮಾಲೀಕ ಗೋವಿಂದ ಶೆಟ್ಟರ ಪಾತ್ರ. ಹೀಗೆ ತರಾವರಿ ಪಾತ್ರಗಳಿಗೆ ಜೀವ ತುಂಬಿರುವ ದತ್ತಣ್ಣ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಗಮನಾರ್ಹ ಪ್ರತಿಭೆ. ಕಿರುತೆರೆಯಲ್ಲಿ ತೀರಾ ಗಂಭೀರ ಪಾತ್ರಗಳಿಂದ ಹಿಡಿದು ಡಂಡಂ ಡಿಗಡಿಗ’ ದಂತಹ ಧಾರಾವಾಹಿಗಳವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಅವರು.

ಪ್ರಶಸ್ತಿ ಗೌರವಗಳ ಲೋಕದಲ್ಲಿ: ಗಿರೀಶ್‌ ಕಾಸರವಳ್ಳಿ, ಜಿ.ವಿ. ಐಯ್ಯರ್‌, ಬಿ.ವಿ.ಕಾರಂತ್‌, ಶೇಷಾದ್ರಿ, ಸೀತಾರಾಂ, ನಾಗಾಭರಣ, ಟಿ.ಎಸ್. ರಂಗ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದ ಪ್ರಖ್ಯಾತ ನಿರ್ದೇಶನಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ದತ್ತಣ್ಣ ಅವರು ಅಭಿನಯಿಸಿರುವ ಈ ಮಹಾನ್ ನಿರ್ದೇಶಕರ ಬಹುತೇಕ ಚಿತ್ರಗಳು ರಾಷ್ಟ್ರ ಪ್ರಶಸ್ತಿಗಳಿಸಿವೆ ಎಂಬುದು ಗಮನಾರ್ಹ. ಆಸ್ಫೋಟ, ಕ್ರೌರ್ಯ, ಕೊಟ್ರೇಶಿ ಕನಸು, ಚೈತ್ರದ ಚಿಗುರು, ಚಿನ್ನಾರಿ ಮುತ್ತ, ಉಲ್ಟಾ ಪಲ್ಟಾ, ಮುನ್ನುಡಿ, ಮುಸ್ಸಂಜೆ, ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಮುಂತಾದ ಪಾತ್ರಗಳು ದತ್ತಣ್ಣನವರಿಗೆ ಖುಷಿ ಕೊಟ್ಟಿವೆ. ಮುನ್ನುಡಿ ಚಿತ್ರದ ಅಭಿನಯಕ್ಕೆ ದತ್ತಣ್ಣನವರಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಪ್ರಶಸ್ತಿ ಪಡೆದ ಪಿ. ಶೇಷಾದ್ರಿಯವರ ನಿರ್ದೇಶನದ ‘ಭಾರತ್ ಸ್ಟೋರ್ಸ್’ ಚಿತ್ರದಲ್ಲಿನ ಅವರ ಅಭಿನಯಕ್ಕೆ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಗೌರವ ಸಂದಿದೆ. ಆಸ್ಪೋಟ ಚಿತ್ರಕ್ಕೆ ಅವರಿಗೆ ಶ್ರೇಷ್ಠ ನಟರೆಂಬ ರಾಜ್ಯಪ್ರಶಸ್ತಿ ಮತ್ತು ಹಲವಾರು ಬಾರಿ ಪೋಷಕ ನಟ ರಾಜ್ಯ ಪ್ರಶಸ್ತಿಗಳೂ ಅಲ್ಲದೆ ಅನೇಕ ಸಂಘಸಂಸ್ಥೆಗಳ ಪ್ರಶಸ್ತಿ ಗೌರವಗಳೂ ಸಂದಿವೆ.

ತಮ್ಮ ಕಾಯಕವನ್ನು ಗೌರವಿಸುವವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಹಾಗಾಗಿ ದತ್ತಣ್ಣನವರು ಎಲ್ಲೆಡೆ ಗೌರವಾನ್ವಿತರು. ಇಂತಹ ಕಲಾವಿದರು ಕಲಾರಂಗದಲ್ಲಿ ಇನ್ನೂ ಇರುವುದರಿಂದಲೇ ಕಲಾರಂಗ ಇನ್ನೂ ತನ್ನ ಮಹತ್ವವನ್ನು ಅಲ್ಲಲ್ಲಿ ಉಳಿಸಿಕೊಂಡಿದೆ. wikipedia

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *