ಎಂ.ಎನ್.ಗಂಗಾಧರ ರಾಯರು (೦೩.೪.೧೮೮೮ – ೧೨.೩.೧೯೬೧): ನಟಭಯಂಕರರೆನಿಸಿದ್ದ ವೃತ್ತಿ ರಂಗಭೂಮಿ ಕಲಾವಿದರಾದ ಗಂಗಾಧರರಾಯರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಗುಬ್ಬಿಯಲ್ಲಿ. ತಂದೆ ನರಸಿಂಹಯ್ಯ, ತಾಯಿ ಸಾಕಮ್ಮ. ವಿದ್ಯಾಭ್ಯಾಸ ಕೂಲಿಮಠದಲ್ಲಿ. ಅಕ್ಷರತಿದ್ದಿ ಮಗ್ಗಿ ಕಲಿತು, ಸ್ತೋತ್ರ ಕಂಠಪಾಠ ಮಾಡಿಕೊಂಡ ಬಾಲಕ. ಅಚ್ಚರಿಹುಟ್ಟಿಸುವ ದೇಹದಾರ್ಢ್ಯ. ದೊಡ್ಡಗಂಟಲು, ಪುಟ್ಟಭೀಮಸೇನ/ಭೋಜಯ್ಯ, ಹಳ್ಳಿಯವರು ಇಟ್ಟ ಹೆಸರು. ಕುಸ್ತಿಪಟ್ಟು, ವರಸೆಗಳನ್ನು ಕಲಿತು ಜಟ್ಟಿಯಂತಾದ ದೇಹ.
ಭಜನೆ, ಸಂಗೀತ, ಹರಿಕಥೆ ನಾಟಕಗಳತ್ತ ಹರಿದ ಒಲವು. ನಾಟಕವೆಂದರೆ ಪಂಚಪ್ರಾಣ. ತುಮಕೂರಿನಲ್ಲಿ ಓದಿದ್ದು ಎಸ್.ಎಸ್.ಎಲ್.ಸಿ. ಮೂಕನ ಹಳ್ಳಿಯಲ್ಲಿ ತೆರೆದ ಪ್ರಾಥಮಿಕ ಶಾಲೆಯಲ್ಲಿ ದೊರೆತ ಉಪಾಧ್ಯಾಯರ ಹುದ್ದೆ. ಪಾಠ ಕಲಿಸುವುದರ ಬದಲಿಗೆ ಕಲಿಸಿದ್ದು ವ್ಯಾಯಾಮ. ಆರು ತಿಂಗಳಲ್ಲಿ ಬೇಸರಬಂದು ವೃತ್ತಿ ತೊರೆದು ಸೇರಿದ್ದು ಪೊಲೀಸ್ ಹುದ್ದೆ. ಅದೂ ತೃಪ್ತಿಕೊಡದೆ ರಾಜೀನಾಮೆ. ಬೆಂಗಳೂರಿನಿಂದ ತಂದ ಗ್ರಾಮೊಫೋನ್ ರೆಕಾರ್ಡ್ ಹಾಕಿ ಹಳ್ಳಿಗರಿಗೆ ಒದಗಿಸಿದ ಮನರಂಜನೆ. ಸಮಯವಿದ್ದರೆ ಬೇಸಾಯದಲ್ಲಿ ಮೈಮುರಿದು ದುಡಿತ.
ಹಳ್ಳಿಯವರ ಅಪೇಕ್ಷೆಯ ಮೇರೆಗೆ ನಾಟಕ ಕಲಿತು ಪ್ರದರ್ಶಿಸಲು ನಿರ್ಧಾರ. ಶಿರಿಯಾಳ ಚರಿತ್ರೆಯಲ್ಲಿ ವಹಿಸಿದ ಧರ್ಮಪಾಲನ ಪಾತ್ರ. ಅದ್ಭುತಮೈಕಟ್ಟು, ಸಾಹಿತ್ಯ, ಸಂಗೀತ ಜ್ಞಾನದಿಂದ ತೋರಿದ ನೈಜ ಅಭಿನಯ. ಜನರಿಂದ ದೊರೆತ ಪ್ರಶಂಸೆ. ನಂತರ ಸೀತಪ್ಪನ ‘ಸೀತಾಮನೋಹರ ನಾಟಕ ಸಭಾ’ದ ಸುಭದ್ರ ನಾಟಕದಲ್ಲಿ ಬಲರಾಮನ ಪಾತ್ರದಿಂದ ತುಮಕೂರು ಜಿಲ್ಲೆಯಲ್ಲೆಲ್ಲಾ ಮನೆಮಾತು. ಗುಬ್ಬಿ ಕಂಪನಿಯಿಂದ ಬಂದ ಆಹ್ವಾನ. ಗುಬ್ಬಿ ಕಂಪನಿಯ ಚನ್ನಬಸವೇಶ್ವರಸ್ವಾಮಿ ನಾಟಕ ಸಂಸ್ಥೆಯ ಪ್ರಹ್ಲಾದ ನಾಟಕದಲ್ಲಿ ’ಹಿರಣ್ಯಕಶಿಪು’, ಕೃಷ್ಣಲೀಲೆಯಲ್ಲಿ ’ಕಂಸ’ನಾಗಿ, ಯಮನಗರ್ವಭಂಗ ನಾಟಕದಲ್ಲಿ ’ಯಮ’ನಾಗಿ ರಾಮಾಯಣದಲ್ಲಿ ’ರಾವಣೇಶ್ವರ’ನಾಗಿ ತೋರಿದ ಪ್ರೌಢ ಅಭಿನಯ. ನಂತರ ನಟಿಸಿದ್ದು ’ಭಾರತ ಜನಮನೋಲ್ಲಾಸಿನಿ ನಾಟಕಸಭಾ’ದಲ್ಲಿ ನಟರಾಗಿ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಲ್ಲಿ ಗಳಿಸಿದ ಖ್ಯಾತಿ.
ರಾಯರಿಗೆ ಪ್ರೇಕ್ಷಕರನ್ನ ನಟನೆಯಿಂದ ಮೋಡಿಮಾಡುವ ಕಲೆ ಕರಗತ. ಚಿತ್ರದುರ್ಗದ ಕಲಾಭಿಮಾನಿಗಳಿಂದ “ಅಭಿನವಕಂಠೀರವ” ಬಿರುದು, ರಾಯಚೂರಿನ ಥಿಯೇಟರಿನಲ್ಲಿ ಶರಭಲೀಲೆ ವೀಕ್ಷಿಸಿದ ವೀರಶೈವ ಮಠಾಧೀಶರಿಂದ ಬಂಗಾರದ ಪದಕದೊಡನೆ “ನಟಭಯಂಕರ” ಬಿರುದು, ಮೈಸೂರು ಸಂಸ್ಥಾನದ ರಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ರವರಿಂದ “ಪ್ರಿನ್ಸ್ಆಫ್ ಆಕ್ಟರ್ಸ್” ಬಿರುದು ಸನ್ಮಾನ ಮುಂತಾದವು.
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.